ನವದೆಹಲಿ : ಕಾಂಗ್ರೆಸ್ ಪಕ್ಷ ಓಲೈಕೆ ರಾಜಕಾರಣಕ್ಕಾಗಿ ವಂದೇ ಮಾತರಂ ಅನ್ನು ವಿಭಜಿಸದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಂದೇ ಮಾತರಂಗೆ 150 ವರ್ಷ ಪೂರ್ಣ ಹಿನ್ನೆಲೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ ದೇಶವು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕಾರಣ ಸರಿಯಾದ ಮನ್ನಣೆ ಸಿಗಲಿಲ್ಲ ಎಂದು ಹೇಳಿದರು.
ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದ ನಂತರ ಸೀಮಿತಗೊಳಿಸಲ್ಪಟ್ಟಾಗಲೇ ತುಷ್ಟೀಕರಣ ಪ್ರಾರಂಭವಾಯಿತು. ಆ ತುಷ್ಟೀಕರಣವು ದೇಶದ ವಿಭಜನೆಗೆ ಕಾರಣವಾಯಿತು. ಕಾಂಗ್ರೆಸ್ ವಂದೇ ಮಾತರಂ ಅನ್ನು ತುಷ್ಟೀಕರಣಕ್ಕಾಗಿ ವಿಭಜಿಸದಿದ್ದರೆ, ದೇಶವು ಎರಡು ಭಾಗವಾಗುತ್ತಿರಲಿಲ್ಲ. ವಂದೇ ಮಾತರಂ ಘೋಷಣೆಯನ್ನು ಪ್ರಚಾರ ಮಾಡಿದ ಮತ್ತು ಕೂಗಿದವರನ್ನು ಇಂದಿರಾ ಗಾಂಧಿ ಜೈಲಿಗೆ ಹಾಕಿದರು ಎಂದು ಹೇಳಿದರು.
ಇಂದು (ಸೋಮವಾರ) ಲೋಕಸಭೆಯಲ್ಲಿ ವಂದೇ ಮಾತರಂ ಕುರಿತು ಚರ್ಚೆಗಳು ನಡೆಯುತ್ತಿದ್ದಾಗ ಗಾಂಧಿ ಕುಟುಂಬದ ಇಬ್ಬರು ಸದಸ್ಯರು ಸದನದಲ್ಲಿ ಇರಲಿಲ್ಲ, ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಪ್ರಸ್ತುತ ನಾಯಕತ್ವದವರೆಗೂ ಕಾಂಗ್ರೆಸ್ ವಂದೇ ಮಾತರಂ ಅನ್ನು ವಿರೋಧಿಸುತ್ತಲೇ ಇದೆ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ವಂದೇ ಮಾತರಂ ಅನ್ನು ಅದರ ಸುವರ್ಣ ಮಹೋತ್ಸವದಂದು ಎರಡು ಚರಣಗಳಿಗೆ ಇಳಿಸಿದರು. ವಂದೇ ಮಾತರಂ ಬಗ್ಗೆ ಚರ್ಚಿಸುವ ಮೂಲಕ ಬಿಜೆಪಿ ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗುತ್ತಿದೆ ಎಂಬ ವಿರೋಧ ಪಕ್ಷದ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಸರ್ಕಾರ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ. ಆದರೆ ವಿರೋಧ ಪಕ್ಷಗಳು ಮೊದಲು ಚರ್ಚೆಗಳನ್ನು ಬಹಿಷ್ಕರಿಸುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.
ದೇಶ ಎದುರಿಸುತ್ತಿರುವ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ವಂದೇ ಮಾತರಂ ಕುರಿತು ಚರ್ಚೆ ನಡೆಯುತ್ತಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಇಂದು ದೇಶಭಕ್ತಿಯನ್ನು ಕಲಿಸುತ್ತಿದ್ದಾರೆ ಎಂದು ಹೇಳಿದರು.
ವಂದೇ ಮಾತರಂ ಅನ್ನು ಸ್ವಾತಂತ್ರ್ಯದ ಘೋಷಣೆಯನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನಾವು ಆರಂಭದಿಂದಲೂ ವಂದೇ ಮಾತರಂ ಹಾಡುತ್ತಿದ್ದೇವೆ, ಕಾಂಗ್ರೆಸ್ನ ಎಲ್ಲ ಸಭೆಗಳಲ್ಲೂ ವಂದೇ ಮಾತರಂ ಹಾಡುತ್ತೇವೆ, ಎಂದೂ ಹಾಡದವರು ಈಗ ವಂದೇ ಮಾತರಂ ಬಗ್ಗೆ ಮಾತನಾಡುತ್ತಿದ್ದಾರೆ.
ಬ್ರಿಟೀಷರಿಗಾಗಿ ಕೆಲಸ ಮಾಡಿದವರು ನಮಗೆ ದೇಶಭಕ್ತಿಯ ಬಗ್ಗೆ ಕಲಿಸುತ್ತೀರಾ? ದೇಶಭಕ್ತಿ ಪದಕ್ಕೂ ಹೆದರಿ ಬ್ರಿಟಿಷರಿಗೆ ಸೇವೆ ಸಲ್ಲಿಸಿದ್ದೀರಿ ಎಂದು ಗುಡುಗಿದರು. ಖರ್ಗೆ ತಮ್ಮ ಭಾಷಣಕ್ಕೂ ಮುನ್ನ ವಂದೇ ಮಾತರಂ ಘೋಷಣೆಯನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಸದನದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ, ಮಾಜಿ ಪ್ರಧಾನಿಯನ್ನು ಕೆಣಕುವ ಎಲ್ಲಾ ಪ್ರಯತ್ನಗಳು ವ್ಯರ್ಥವಾಗುತ್ತವೆ ಮತ್ತು ಬಿಜೆಪಿ ಎಂದಿಗೂ ಹಾಗೆ ಮಾಡುವಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಖರ್ಗೆ ಹರಿಹಾಯ್ದರು.















