ಬೆಂಗಳೂರು : ಕೇಂದ್ರ ಸರ್ಕಾರದ ಗೃಹ ಇಲಾಖೆಯ ‘ರಾಜ ಭಾಷಾ ಸಮಿತಿ’ ಬೆಂಗಳೂರಿನ ತಾಜ್ವೆಸ್ಟ್ಎಂಡ್ ಹೋಟೆಲಿನಲ್ಲಿ ಇಂದು ಆಯೋಜಿಸಿದ್ದ, ಹಿಂದಿ ಪ್ರಚಾರ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆ ಏಕಿಏಕಿ ದಾಳಿ ನಡೆಸಿದೆ.
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಮಾರ್ಗದರ್ಶನದಲ್ಲಿ ನೂರಾರು ಕಾರ್ಯಕರ್ತರು ಪಂಚತಾರಾ ಹೋಟೆಲ್ನಲ್ಲಿ ಆರು ಮಂದಿ ಸಂಸತ್ ಸದಸ್ಯರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಕಾರ್ಯಕ್ರಮದ ನಡುವೆ ಕರವೇ ಕಾರ್ಯಕರ್ತರು ಯಾವುದೇ ಮುನ್ಸೂಚನೆ ನೀಡದೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು. ಪ್ರತಿಭಟನೆಯ ನೇತೃತ್ವವನ್ನು ಕರವೇ ಜಿಲ್ಲಾಧ್ಯಕ್ಷ ಧರ್ಮರಾಜ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ಮೋಹನ್ ವಹಿಸಿದ್ದರು.















