ಬೆಂಗಳೂರು(Bengaluru): ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲು ಪ್ರಮಾಣ ಏರಿಕೆ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ಕಂದಾಯ ಸಚಿವ ಆರ್. ಅಶೋಕ್ ಸೋಮವಾರ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಸಲ್ಲಿಸಿದ್ದು, ಶ್ರೀಗಳು ಕಳೆದ 257 ದಿನಗಳಿಂದ ನಡೆಸುತ್ತಿದ್ದ ಹೋರಾಟ ಅಂತ್ಯಗೊಂಡಿದೆ.
ಹರಿಹರದ ರಾಜನಹಳ್ಳಿ ಗುರುಪೀಠದಿಂದ ಪಾದಯಾತ್ರೆಯಲ್ಲಿ ಆಗಮಿಸಿ ಬೆಂಗಳೂರು ನಗರದ ಫ್ರೀಡಂ ಪಾರ್ಕ್’ನಲ್ಲಿ ಕಳೆದ 257 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದರು. ಅಧಿಕೃತ ಆದೇಶದ ಪ್ರತಿ ಕೈ ಸೇರದ ಹೊರತು ಸತ್ಯಾಗ್ರಹ ಕೈ ಬಿಡುವುದಿಲ್ಲ ಎಂದು ಘೋಷಿಸಿದ್ದರು.
ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುತ್ತಿದ್ದಂತೆ ಭಾನುವಾರ ರಾತ್ರಿಯೇ ಸರಕಾರ ಆದೇಶ ಹೊರಡಿಸಿ ವಿಶೇಷ ರಾಜ್ಯಪತ್ರ ಪ್ರಕಟಿಸಿತ್ತು.
ಕಂದಾಯ ಸಚಿವರು ಸೋಮವಾರ ಸ್ವಾಮೀಜಿ ಅವರನ್ನು ಧರಣಿ ನಿರತ ಸ್ಥಳದಲ್ಲಿ ಭೇಟಿ ಮಾಡಿ ಸರಕಾರದ ಆದೇಶ ಪತ್ರ ಹಸ್ತಾಂತರಿಸಿ, ನಿರಶನ ಅಂತ್ಯಗೊಳಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್, ಪರಿಶಿಷ್ಟ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ಸರಕಾರ ನೀಡಿದೆ. ಶ್ರೀರಾಮ ವನವಾಸ ಮುಗಿಸಿ ಮನೆಗೆ ಮರಳಿ ಬಂದ ಹಾಗೂ ವಾಲ್ಮೀಕಿ ರಾಮಾಯಣ ಬರೆದ ದಿನ ಇಂದು. ದೀಪಾವಳಿ ಶುಭ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸರಕಾರ ಮೀಸಲು ಹೆಚ್ಚಳದ ಉಡುಗೊರೆ ನೀಡಿದ್ದು, ಈ ಸಮುದಾಯಗಳ ಜನರಲ್ಲಿ ಬೆಳಕು ಮೂಡಲಿ ಎಂದು ಆಶಿಸಿದರು.
ಮೀಸಲು ಹೆಚ್ಚಳ ಮಾಡುವುದು ಜೇನುಗೂಡಿಗೆ ಕಲ್ಲೆಸೆಯುವ ಕಾರ್ಯ ಎಂಬ ಅಭಿಪ್ರಾಯ ಕೇಳಿ ಬರುತ್ತಿತ್ತು. ಆದರೆ, ಸಿಎಂ ಬೊಮ್ಮಾಯಿ ಅವರು ಈ ಸವಾಲನ್ನು ಧೈರ್ಯವಾಗಿ ಎದುರಿಸಿ ಸಂವಿಧಾನ ಬದ್ಧ ಮೀಸಲು ಅವಕಾಶ ಹೆಚ್ಚಳದ ತೀರ್ಮಾನ ಮಾಡಿದ್ದಾರೆ. ಇದು ಬಿಜೆಪಿ ಸರಕಾರದ ಬದ್ಧತೆಯ ತೀರ್ಮಾನ ಎಂದು ಹೇಳಿದರು.















