ನವದೆಹಲಿ : ದೀಪಾವಳಿ ಮೊದಲ ದಿನವೇ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿದೆ. ಕಳೆದ ಏಳು ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಸದ್ಯ AQI 400ರ ಗಡಿ ದಾಟಿದ್ದು, ಮುಂದಿನ ಒಂದು ವಾರದಲ್ಲಿ ಈ ಪ್ರಮಾಣ AQI 600 ಗಡಿ ದಾಟಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
ದೆಹಲಿಯ 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 24 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ʼತುಂಬಾ ಕಳಪೆʼ ಮಟ್ಟವನ್ನು ದಾಖಲಿಸಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಸೋಮವಾರ ಬೆಳಗ್ಗೆ, ಆನಂದ್ ವಿಹಾರ್ ನಗರದಲ್ಲಿ ಅತ್ಯಂತ ವಿಷಕಾರಿ ಗಾಳಿಯನ್ನು ವರದಿ ಮಾಡಿದೆ, AQI 417 ರೊಂದಿಗೆ, ಇದು ʼತೀವ್ರ ಕಳಪೆʼ ವರ್ಗಕ್ಕೆ ಇಳಿದಿದೆ.
ವಜೀರ್ಪುರ (364), ವಿವೇಕ್ ವಿಹಾರ್ (351), ದ್ವಾರಕಾ (335), ಮತ್ತು ಆರ್ಕೆ ಪುರಂ (323) ಸೇರಿದಂತೆ 12 ನಿಲ್ದಾಣಗಳು ಗಾಳಿಯ ಗುಣಮಟ್ಟವನ್ನು ʼತುಂಬಾ ಕಳಪೆʼ ವ್ಯಾಪ್ತಿಯಲ್ಲಿ ವರದಿ ಮಾಡಿವೆ. ಸಿಪಿಸಿಬಿ ದತ್ತಾಂಶದ ಪ್ರಕಾರ, ಸಿರಿ ಫೋರ್ಟ್, ದಿಲ್ಶಾದ್ ಗಾರ್ಡನ್ ಮತ್ತು ಜಹಾಂಗೀರ್ಪುರಿ ಮುಂತಾದ ಇತರ ಪ್ರದೇಶಗಳು 318 ಎಕ್ಯೂಐ ದಾಖಲಿಸಿವೆ. ಪಂಜಾಬಿ ಬಾಗ್ 313, ನೆಹರು ನಗರ 310, ಅಶೋಕ್ ವಿಹಾರ್ 305 ಮತ್ತು ಬವಾನಾ 304ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿವೆ.
ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆ GRAP ಹಂತ IIರ ನಿಯಮಗಳನ್ನು ಜಾರಿ ಮಾಡಿದೆ. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ II ಆಕ್ಷನ್ ಕ್ವಾಲಿಟಿ ಇಂಡೆಕ್ಸ್ (AQI) 301 ರಿಂದ 400ರವರೆಗಿನ ʼಅತ್ಯಂತ ಕಳಪೆʼ ವರ್ಗಕ್ಕೆ ಸೇರಿದಾಗ ಜಾರಿಗೊಳಿಸಲಾಗುತ್ತದೆ. ಇದು ಹಂತ I ನ ನಿಯಮಗಳನ್ನು ಸೇರಿಸಿ ಜಾರಿಯಲ್ಲಿರುತ್ತದೆ.
ಈ ನಿಯಮಗಳ ಪ್ರಕಾರ ಮಾಲಿನ್ಯ ನಿಯಂತ್ರಣಕ್ಕೆ ಬರುವವರೆಗೂ ಕಟ್ಟಡ ನಿರ್ಮಾಣ ಕಾಮಗಾರಿಗಳ ನಿಲ್ಲಿಸಬೇಕಾಗುತ್ತದೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಓಪನ್ ಈಟರಿಗಳಲ್ಲಿ ತಂದೂರ್ಗಳಲ್ಲಿ ಕಲ್ಲಿದ್ದಲು ಬಳಕೆ ನಿಷೇಧ ಮಾಡಲಾಗುತ್ತದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಡೀಸೆಲ್ ಜನರೇಟರ್ಗಳ ಬಳಕೆಯನ್ನು ನಿರ್ಬಂಧಿಸಲಾಗುತ್ತದೆ.
ಅಂತರ್ ರಾಜ್ಯ ಬಸ್ಗಳ ಪ್ರವೇಶವನ್ನು CNG, ಎಲೆಕ್ಟ್ರಿಕ್ ಅಥವಾ BS-VI ಡೀಸೆಲ್ ಇಂಧನದ್ದಕ್ಕೆ ಮಾತ್ರ ಸೀಮಿತಗೊಳಿಸುವುದು. ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು, CNG ಮತ್ತು ಎಲೆಕ್ಟ್ರಿಕ್ ಬಸ್ಗಳನ್ನು ಹೆಚ್ಚಿಸುವುದು, ಮೆಟ್ರೋ ಸೇವೆಗಳ ಆಪರೇಷನ್ ಫ್ರೀಕ್ವೆನ್ಸಿಯನ್ನು ಹೆಚ್ಚಿಸುವುದು, ಖಾಸಗಿ ವಾಹನಗಳನ್ನು ತಡೆಯಲು ಪಾರ್ಕಿಂಗ್ ಶುಲ್ಕಗಳನ್ನು ಹೆಚ್ಚಿಸಲಾಗುವುದು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ದೀಪಾವಳಿಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ನಿವಾಸಿಗಳಿಗೆ ಶುಭ ಹಾರೈಸಿದರು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲರೂ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಮನವಿ ಮಾಡಿದ್ದಾರೆ.















