ನವದೆಹಲಿ/ಬೀಜಿಂಗ್ : ಚೀನಾ ಮತ್ತೆ ತನ್ನ ಕುತಂತ್ರ ಬುದ್ಧಿ ತೋರಿಸಿದ್ದು, ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈ ಪ್ರಶ್ನೆಗಳು ಇದೀಗ ಜಾಗತಿಕ ಮಟ್ಟದಲ್ಲಿ ಪ್ರತಿಧ್ವನಿಸುತ್ತಿವೆ. ಇದಕ್ಕೆ ಕಾರಣ, ಶಾಂಘೈ ವಿಮಾನ ನಿಲ್ದಾಣದಲ್ಲಿ ನಮ್ಮದೇ ದೇಶದ, ಅರುಣಾಚಲ ಪ್ರದೇಶದ ಮಹಿಳೆಯೊಬ್ಬರಿಗೆ ಚೀನೀ ಅಧಿಕಾರಿಗಳು ನೀಡಿದ ನರಕಯಾತನೆಯಾಗಿದೆ.
ಭಾರತದ ಪಾಸ್ಪೋರ್ಟ್ ಹೊಂದಿದ್ದ, ಅರುಣಾಚಲ ಪ್ರದೇಶದ ಮಹಿಳೆಯೊಬ್ಬರನ್ನು 18 ಗಂಟೆಗಳ ಕಾಲ ಬಂಧಿಸಿ, ಕಿರುಕುಳ ನೀಡಿ, ಅಮಾನವೀಯವಾಗಿ ನಡೆಸಿಕೊಂಡಿದೆ ಚೀನಾದ ಸರ್ಕಾರ. ಅಲ್ಲದೇ ʻಝಾಂಗ್ನಾನ್ʼ ಭಾರತದ ಭಾಗ ಅಂತ ನಾವು ಎಂದಿಗೂ ಒಪ್ಪಿಕೊಂಡಿಲ್ಲ, ಅದು ನಮ್ಮ ಪ್ರದೇಶ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ಮಹಿಳೆ ಪ್ರಜೆ ಪೆಮಾ ವಾಂಗ್ಜೋಮ್ ಥೋಂಗ್ಡಾಕ್ ಅವರ ಪಾಸ್ಪೋರ್ಟ್ ಅನ್ನು ಅಸಿಂಧು ಅಂತ ಘೋಷಿಸಿದೆ. ಇದಕ್ಕೆ ಭಾರತ ಖಡಕ್ ಉತ್ತರ ನೀಡಿದೆ.
ಚೀನಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ, ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿದೆ. ಇದು ಸ್ವಯಂ-ಸ್ಪಷ್ಟ ಹಾಗೂ ಸತ್ಯ. ಚೀನಾದ ಕಡೆಯಿಂದ ಎಷ್ಟೇ ನಿರಾಕರಣೆ ಬಂದರೂ ಈ ನಿರ್ವಿವಾದದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಅಲ್ಲದೇ ಚೀನಾದ ಅಧಿಕಾರಿಗಳ ವಿರುದ್ಧ ನವದೆಹಲಿಯಲ್ಲಿರುವ ಕಚೇರಿಗೆ ಬಲವಾದ ಪ್ರತಿಭಟನೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾನೂನುಬದ್ಧವಾಗಿ ಮಾನ್ಯ ಭಾರತೀಯ ಪಾಸ್ಪೋರ್ಟ್ನಲ್ಲಿ ಸಾಗುತ್ತಿದ್ದ ಪ್ರಯಾಣಿಕರ ನಡವಳಿಕೆ ಸಮರ್ಥಿಸಲು ಚೀನಾ ಅಧಿಕಾರಿಗಳು ವಿಫಲರಾಗಿದ್ದಾರೆ. ಅಲ್ಲದೇ, ಚೀನಾದ ಕ್ರಮಗಳು ಸಮರ್ಥನೀಯವಲ್ಲ. ಅಂತಾರಾಷ್ಟ್ರೀಯ ವಿಮಾನಯಾನ ಶಿಷ್ಟಾಚಾರವನ್ನ ನೇರವಾಗಿ ಉಲ್ಲಂಘಿಸಿದೆ. ಈ ಬಗ್ಗೆ ಇನ್ನೂ ವಿವರಣೆ ಕೊಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಎಲ್ಲಾ ದೇಶಗಳ ನಾಗರಿಕರಿಗೆ 24 ಗಂಟೆಗಳವರೆಗೆ ವೀಸಾ-ಮುಕ್ತ ಸಾರಿಗೆಯನ್ನ ಅನುಮತಿಸುತ್ತದೆ. ಆದಾಗ್ಯೂ, ಈ ಪ್ರಕರಣದಲ್ಲಿ, ಅಧಿಕಾರಿಗಳು ವಿವರಿಸಲಾಗದಂತೆ ಪ್ರಯಾಣಿಕರ ಜನ್ಮಸ್ಥಳವಾದ ಅರುಣಾಚಲ ಪ್ರದೇಶವನ್ನ ಗುರಿಯಾಗಿಸಿಕೊಂಡು, ಅದು ಚೀನಾಕ್ಕೆ ಸೇರಿದ್ದು ಎಂದು ಹೇಳಿಕೊಂಡು, ಅವರ ಭಾರತೀಯ ಪಾಸ್ಪೋರ್ಟ್ ಅನ್ನು ʻಅಮಾನ್ಯʼ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಚೀನಾ ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿದೆ ಓತ್ತಿ ಹೇಳಿದ್ದಾರೆ.















