ಬೆಂಗಳೂರು : ಇಂಡಿಗೋ ವಿಮಾನ ಸಮಸ್ಯೆಯಿಂದ ಈಗ ವಿಮಾನ ದರದಷ್ಟೇ ಬಸ್ಸು ಪ್ರಯಾಣ ದರ ಭಾರೀ ಏರಿಕೆಯಾಗಿದೆ. ವಿಮಾನಗಳಿಲ್ಲದ ಕಾರಣ ಬಸ್ಸುಗಳತ್ತ ಹಲವರು ಮುಖಮಾಡಿದ್ದಾರೆ. ಇದರಿಂದಾಗಿ ಬೆಂಗಳೂರಿನಿಂದ ಮುಂಬೈ, ಪುಣೆಗಳಿಗೆ ಸಂಚರಿಸುವ ಬಸ್ಸುಗಳ ದರ ಭಾರೀ ಏರಿಕೆಯಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮುಂಬೈಗೆ 1,500 ರೂ. ನಿಂದ 2,500 ರೂ. ಇರುತ್ತಿತ್ತು. ಆದರೆ 4,500 ರೂ. ನಿಂದ 10,000 ರೂ.ಗೆ ಏರಿಕೆಯಾಗಿದೆ. ಮೊದಲು ಬೆಂಗಳೂರಿನಿಂದ ಪುಣೆ ಪ್ರಯಾಣ ದರ 1,200 ರೂ. ನಿಂದ 1,600 ರೂ. ಇತ್ತು. ಆದರೆ ಇಂದು 3,500 ರೂ. ನಿಂದ 6,000 ರೂ.ಗೆ ಏರಿಕೆಯಾಗಿದೆ.
ಇಂಡಿಗೋ ಸಮಸ್ಯೆಯಿಂದ ಕೆಲ ವಿಮಾನಯಾನ ಸಂಸ್ಥೆಗಳ ಟಿಕೆಟ್ಗಳ ಬೆಲೆಯನ್ನು ಮೂರುಪಟ್ಟು ಹೆಚ್ಚಿಸಿವೆ. ಭಾರತದಿಂದ ವಿದೇಶಕ್ಕೆ ಹೋಗುವ ಟಿಕೆಟ್ ದರಕ್ಕಿಂತಲೂ ದೇಶದ ಒಳಗಡೆ ಸಂಚರಿಸುವ ಟಿಕೆಟ್ ದರ ದುಬಾರಿಯಾಗಿದೆ ಎಂದು ವಿಮಾನ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು. ವಿಮಾನ ಕಂಪನಿಗಳು ಲಾಭ ಮಾಡುತ್ತಿದ್ದಂತೆ ಇನ್ನೊಂದು ಕಡೆ ಖಾಸಗಿ ಬಸ್ಸುಗಳು ಈಗ ಪ್ರಯಾಣಿಕರಿಂದ ಸುಲಿಗೆ ಮಾಡಲು ಮುಂದಾಗಿದೆ.














