ಪಾಟ್ನಾ : ಬಿಹಾರ ಚುನಾವಣೆಯಲ್ಲಿ ಎನ್ಡಿಎ ಭಾರೀ ಮುನ್ನಡೆ ಸಾಧಿಸುತ್ತಿದೆ. ಇದರ ನಡುವೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈ ಬಾರಿ ಬಿಹಾರದಲ್ಲಿ ಗೆಲುವು ನಮ್ಮದೇ, ಇನ್ನೇನಿದ್ರೂ ನಮ್ಮ ಪಕ್ಷದ ಗೆಲುವು ಪಶ್ಚಿಮ ಬಂಗಾಳದಲ್ಲಿ ಎಂದು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಗಿರಿರಾಜ್ ಸಿಂಗ್ ಅವರು, ಬಿಹಾರದ ನಾಗರಿಕರು ಅರಾಜಕತೆ ಹಾಗೂ ಭ್ರಷ್ಟ ನಾಯಕತ್ವವನ್ನು ನೇರವಾಗಿ ತಿರಸ್ಕರಿಸುತ್ತಾರೆ. ಹೀಗಾಗಿ ನಾನು ಸ್ಪಷ್ಟವಾಗಿ ಹೇಳ್ತಿನಿ, ಬಿಹಾರದಲ್ಲಿ ಈ ಬಾರಿ ಗೆಲುವು ನಮ್ಮದು, ಇನ್ನೂ ಮುಂದೆ ಬಂಗಾಳದ ಸರದಿ. ನಾವು ಬಂಗಾಳದಲ್ಲಿಯೂ ಗೆಲುವು ಸಾಧಿಸುತ್ತೇವೆ. ಈಗಿರುವ ಸರ್ಕಾರ ಅವ್ಯವಸ್ಥೆಯಿಂದ ಕೂಡಿದೆ. ಹೀಗಾಗಿ ಅಲ್ಲಿನ ಜನರು ಅಂತಿಮವಾಗಿ ಉತ್ತಮ ನಾಯಕತ್ವವನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಬಿಹಾರ ಚುನಾವಣೆಯ ಫಲಿತಾಂಶವು, ಕಾನೂನು ಬಾಹಿರವಾಗಿರುವವರನ್ನು ತಿರಸ್ಕರಿಸಿ, ಅಭಿವೃದ್ಧಿಯತ್ತ ಸಾಗುವವರನ್ನು ಆಯ್ಕೆಮಾಡಿದೆ ಎಂಬುವನ್ನು ಪ್ರತಿಬಿಂಬಿಸುತ್ತದೆ. ನಾವು ಪ್ರಗತಿಯ ಪಥದತ್ತ ಸಾಗುತ್ತೇವೆ, ಕಳಪೆ ವಿವಿಗಳನ್ನು ಬದಲಾಯಿಸಿ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯುತ್ತೇವೆ ಎಂದು ತಿಳಿಸಿದ್ದಾರೆ.
ಮಾಹಿತಿಗಳ ಪ್ರಕಾರ, 243 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ 195 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎದುರಾಳಿ ಮಹಾಘಟಬಂಧನ್ 45 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಸಾಧಿಸಿದ್ದು, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇಂದಿನ ಯುವಕರು ಬಿಹಾರದಲ್ಲಿ ಭ್ರಷ್ಟ ನಾಯಕರ ಆಳ್ವಿಕೆಯನ್ನು ನೋಡಲು ಬಯಸುವುದಿಲ್ಲ. ಫಲಿತಾಂಶದ ಬಳಿಕ ನಿತೀಶ್ ಕುಮಾರ್ ಅವರ ಅಡಿಯಲ್ಲಿ ಸರ್ಕಾರ ರಚನೆಯಾಗಲಿದೆ, ಅದರಲ್ಲಿ ಯಾವುದೇ ಗೊಂದಲವಿಲ್ಲ. ಇದಕ್ಕೂ ಮುನ್ನ ನಿತೀಶ್ ಕುಮಾರ್ ಅವರು ಪರಿಣಾಮಕಾರಿಯಾಗಿ ಸರ್ಕಾರವನ್ನು ಮುನ್ನಡೆಸಿದ್ದಾರೆ ಎಂದಿದ್ದಾರೆ.















