ಮನೆ ರಾಜಕೀಯ ಜಗದೀಪ್ ಧನ್ಖರ್ ಅನುಕರಣೆ ವಿವಾದ: ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡ ಕಪಿಲ್ ಸಿಬಲ್

ಜಗದೀಪ್ ಧನ್ಖರ್ ಅನುಕರಣೆ ವಿವಾದ: ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡ ಕಪಿಲ್ ಸಿಬಲ್

0

ದೆಹಲಿ: ಚಳಿಗಾಲದ ಅಧಿವೇಶನ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರನ್ನು ಅನುಕರಣೆ ಮಾಡಿದ್ದು, ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್ ನಲ್ಲಿ ರೆಕಾರ್ಡ್ ಮಾಡಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ರಾಹುಲ್ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ

ರಾಜ್ಯಸಭಾ ಅಧ್ಯಕ್ಷರೂ ಆಗಿರುವ ಜಗದೀಪ್ ಧನ್ಖರ್ ಅವರನ್ನು ಕಲ್ಯಾಣ್ ಬ್ಯಾನರ್ಜಿ ಅನುಕರಣೆ ಮಾಡಿದ್ದನ್ನು ರೆಕಾರ್ಡ್ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಬಿಜೆಪಿ ನಾಯಕರು ಟೀಕಿಸಿದ್ದು, ಇದು ಉಪರಾಷ್ಟ್ರಪತಿಗೆ ಮಾಡಿದ ಅವಮಾನ ಎಂದಿದ್ದಾರೆ. ಆದರೆ ವಿಡಿಯೊ ಮಾಡುವುದರಲ್ಲಿ ತಪ್ಪೇನು? ವಿಡಿಯೊವನ್ನು ಎಲ್ಲಿಯೂ ಬಳಸಿಲ್ಲ ಎಂದು ಕಪಿಲ್ ಸಿಬಲ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಸಿಬಲ್ ತಮ್ಮ ನಾಯಕನನ್ನು ಸಮರ್ಥಿಸಿಕೊಂಡಿದ್ದು, ನಾನು ಅಲ್ಲಿರುತ್ತಿದ್ದರೆ ಅಂಥದ್ದೇನೂ ಮಾಡುತ್ತಿರಲಿಲ್ಲ. “ಆದರೆ ಅನುಕರಿಸುವವರು ಅದರ ಬಗ್ಗೆ ಯೋಚಿಸಬೇಕಿತ್ತು” ಎಂದು ಬ್ಯಾನರ್ಜಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. “ಇದು ರಾಜಕೀಯ ವಿಷಯವಲ್ಲ ಏಕೆಂದರೆ ಸಾಂವಿಧಾನಿಕ ಹುದ್ದೆಗಳನ್ನು ಎಷ್ಟು ಮಟ್ಟಿಗೆ ಅವಮಾನಿಸಲಾಗುತ್ತಿದೆ ಎಂಬುದು ಆತಂಕಕಾರಿಯಾಗಿದೆ” ಎಂದು ರಾಜ್ಯಸಭಾ ಸಂಸದ ಹೇಳಿದ್ದಾರೆ.

ಶನಿವಾರದಂದು ಟಿಎಂಸಿ ನಾಯಕ ಮತ್ತೊಮ್ಮೆ ಧನ್ಖರ್ ಅವರನ್ನು ಅನುಕರಿಸಿದ್ದು ಈ ನಡುವೆಯೇ ಸಿಬಲ್ ಅವರ ಪ್ರತಿಕ್ರಿಯೆ ಬಂದಿದೆ. ಕಳೆದ ವಾರ ಕಲ್ಯಾಣ್ ಬ್ಯಾನರ್ಜಿ ಅವರು ಸಂಸತ್ತಿನ ಮಕರ ದ್ವಾರದಲ್ಲಿ ಇತರ ಅಮಾನತುಗೊಂಡ ಸಂಸದರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ ಧನ್ಖರ್ ಅವರನ್ನು ಅನುಕರಿಸಿ ವಿವಾದಕ್ಕೀಡಾಗಿದ್ದರು.

ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಧನ್ಖರ್ ಭಾರತದ ಉಪರಾಷ್ಟ್ರಪತಿಯಾಗಿ ತಮ್ಮ ಸ್ಥಾನವನ್ನು ವಿರೋಧ ಪಕ್ಷದ ಸದಸ್ಯರು ಅವಮಾನಿಸಿದ್ದಾರೆ. ಇದು ಜಾಟ್, ಅವರ ಜಾತಿ ಮತ್ತು ರೈತರ ಕುಟುಂಬದಿಂದ ಬಂದಿರುವ ಅವರ ಹಿನ್ನೆಲೆಗೆ ಅವಮಾನವಾಗಿದೆ ಎಂದಿದ್ದಾರೆ ಶನಿವಾರ ಪಶ್ಚಿಮ ಬಂಗಾಳದ ಸೆರಾಂಪೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಬ್ಯಾನರ್ಜಿ ಅವರು ಧರ್ಖರ್ ಅನ್ನು ಅನುಕರಣೆ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಅನುಕರಣೆ ಒಂದು ಕಲೆ,ನಾನು ಇದನ್ನು ಸಾವಿರ ಬಾರಿ ಮಾಡುತ್ತೇನೆ. ಹಾಗೆ ಮಾಡಲು ನನಗೆ ಮೂಲಭೂತ ಹಕ್ಕಿದೆ ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

“ನಾನು ಮಿಮಿಕ್ರಿ ಮಾಡುತ್ತಲೇ ಇರುತ್ತೇನೆ. ಅದೊಂದು ಕಲಾ ಪ್ರಕಾರ. ಬೇಕಾದರೆ ಸಾವಿರ ಬಾರಿ ಮಾಡುತ್ತೇನೆ. ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನನಗೆ ಎಲ್ಲಾ ಮೂಲಭೂತ ಹಕ್ಕುಗಳಿವೆ. ನೀವು ನನ್ನನ್ನು ಜೈಲಿಗೆ ಹಾಕಬಹುದು. ನಾನು ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ ಕಲ್ಯಾಣ್ ಬ್ಯಾನರ್ಜಿ.

ಹಿಂದಿನ ಲೇಖನಮಹಿಳೆ ಜೊತೆ ಅಸಭ್ಯ ವರ್ತನೆ,ಪಿಎಸ್ಐ ಅಮಾನತು: ಠಾಣೆಯ ಸಿಪಿಐ, ಸಿಬ್ಬಂದಿ ವಿರುದ್ಧ ಸಿಡಿದೆದ್ದ ಸಸ್ಪೆಂಡೆಡ್ ಪಿಎಸ್ಐ ನರಸಿಂಹರಾಜು
ಮುಂದಿನ ಲೇಖನಶಿವಾನಂದ ಪಾಟೀಲ ಬೇಷರತ್ ಕ್ಷಮೆ ಕೇಳಬೇಕು: ಹೆಚ್ ಡಿ ಕುಮಾರಸ್ವಾಮಿ ಆಗ್ರಹ