ದಾವಣಗೆರೆ: ಜೆಡಿಎಸ್’ನ ಪಂಚರತ್ನ ಯಾತ್ರೆ ಹಾಸನದಲ್ಲಿಯೇ ಎಂಜಿನ್ ಸೀಜ್ ಆಗಿ ಉಳಿದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ಮಾರ್ಚ್ 25ಕ್ಕೆ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ, ನಾಲ್ಕು ರಥಗಳ ಮಹಾ ಸಂಗಮ ಕಾರ್ಯಕ್ರಮಕ್ಕಾಗಿ ಇಲ್ಲಿನ ಜಿಎಂಐಟಿ ಬಳಿ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್’ನ ಪ್ರಜಾಧ್ವನಿ ಯಾತ್ರೆಯ ಧ್ವನಿಯೇ ಕೇಳಿಸುತ್ತಿಲ್ಲ ಎಂದರು.
ಕಾಂಗ್ರೆಸ್ 60–70ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯುವುದಿಲ್ಲ. ಜೆಡಿಎಸ್ ಅನ್ನು 25 ದಾಟಲು ನಾವು ಬಿಡುವುದಿಲ್ಲ. 150 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ನಮ್ಮದಾಗಿತ್ತು. ಜನರ ಸ್ಪಂದನೆ ನೋಡಿದರೆ 150 ಮೀರಿ ಗೆಲ್ಲಲಿದ್ದೇವೆ. ಯಾವ ಸಮ್ಮಿಶ್ರ ಸರ್ಕಾರವೂ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಮಾರ್ಚ್ 25ರಂದು ನಡೆಯುವ ಈ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಮತದಾರರು ತಯಾರಾಗಿದ್ದಾರೆ. 25ರವರೆಗೆ ವಿಜಯ ಸಂಕಲ್ಪ ಯಾತ್ರೆ, ಬಳಿಕ ವಿಜಯ ದುಂದುಬಿಯಾಗಲಿದೆ. ಬಿಜೆಪಿಗೆ ಶಕ್ತಿ ತುಂಬುವ ಸಮಾವೇಶ ಇದಾಗಲಿದೆ ಎಂದು ಬಣ್ಣಿಸಿದರು.
ಸಿದ್ದರಾಮಯ್ಯ ಅವರ ಜನ್ಮದಿನದ ಆಚರಣೆಗೆ ರಾಜ್ಯದಾದ್ಯಂತ ಜನ ಕರೆಸಿದ್ದರು. ನಾವು ಅವರಂತಲ್ಲ. ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಲ್ಕೈದು ಜಿಲ್ಲೆಗಳ ಜನರಷ್ಟೇ ಭಾಗವಹಿಸುತ್ತಾರೆ. ರಾಜ್ಯದಾದ್ಯಂತ ಕರೆಸುವುದಿಲ್ಲ. 3 ಲಕ್ಷ ಸೇರಿದರೆ 5 ಲಕ್ಷ ಎಂದು ಹೇಳುವುದಿಲ್ಲ. ಇಲ್ಲಿ 10 ಲಕ್ಷ ಜನರನ್ನು ಸೇರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ಕಾರ್ಯವಾಗಬೇಕು. ಅದಕ್ಕಾಗಿ ಈ ಭಾಗದ ಕಾರ್ಯಕರ್ತರಷ್ಟೇ ಕೆಲಸ ಮಾಡಿದರೆ ಸಾಲದು. ನಾಯಕರು ಕೂಡ ಕೆಲಸ ಮಾಡಬೇಕು. ಮನೆಮನೆಗೆ ತೆರಳಬೇಕು ಎಂದು ಸೂಚನೆ ನೀಡಿದರು.
ಸಂಸದರಾದ ಜಿ.ಎಂ. ಸಿದ್ದೇಶ್ವರ, ದೇವೇಂದ್ರಪ್ಪ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಎನ್.ಲಿಂಗಣ್ಣ, ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಅರುಣ್ ಕುಮಾರ್ ಪೂಜಾರ್, ಕೆ.ಎಸ್. ನವೀನ್, ಕೇಶವ ಪ್ರಸಾದ್, ಎಸ್.ವಿ. ರಾಮಚಂದ್ರ, ಹೇಮಲತಾ ನಾಯ್ಕ್, ತಿಪ್ಪಾರೆಡ್ಡಿ, ಆರ್. ಶಂಕರ್, ಮುಖಂಡರಾದ ಬಿ.ಪಿ. ಹರೀಶ್, ಶಿವಲಿಂಗಪ್ಪ, ಬಸವರಾಜ ನಾಯ್ಕ್, ಎ.ವೈ. ಪ್ರಕಾಶ್, ಸುಧಾ ಜಯರುದ್ರೇಶ್, ಎ.ಎಸ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಅಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಮತ್ತಿತರರಿದ್ದರು.















