ಬೆಂಗಳೂರು/ಧಾರವಾಡ : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಮಂಗಳವಾರ (ಫೆ.24) ಪ್ರತಿಭಟನೆ ಮಾಡಿದ ಬೆನ್ನಲ್ಲೇ ಬುಧವಾರ (ಫೆ.25) ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ ಸಲ್ಲಿಕೆ ಮಾಡಿ, ಉದ್ಯೋಗಾಕಾಂಕ್ಷಿಗಳು ಬೆಂಬಲ ಕೇಳಿದರು. ಜೆಪಿ ಭವನದಲ್ಲಿ ದೇವೇಗೌಡರನ್ನ ಭೇಟಿಯಾದ ಉದ್ಯೋಗಾಕಾಂಕ್ಷಿಗಳು ಯುವಕರ ಹೋರಾಟಕ್ಕೆ ಬೆಂಬಲ ಕೊಡುವಂತೆ ಕೋರಿದರು.
ದೇವೇಗೌಡ ಭೇಟಿ ಬಳಿಕ ಮಾತಾಡಿದ ಉದ್ಯೋಗಾಕಾಂಕ್ಷಿ ಲಕ್ಷ್ಮಿಕಾಂತ್, ಸರ್ಕಾರ ಪ್ರತಿ ವರ್ಷ 1ಲಕ್ಷ ಹುದ್ದೆ ಸೃಷ್ಟಿ ಮಾಡ್ತೇವೆ ಎಂದು ಹೇಳಿದ್ರು. ಆದ್ರೆ ಹುದ್ದೆಗಳ ಸೃಷ್ಟಿಸುವ ಕೆಲಸ ಮಾಡ್ತಿಲ್ಲ. ಸುಳ್ಳು ಆಶ್ವಾಸನೆ ಯಾಕೆ ಕೊಡ್ತೀರಾ? ಕಳೆದ ಒಂದು ವರ್ಷದಿಂದ ಎಲ್ಲಾ ಕಡೆ ಹೋರಾಟ ಮಾಡ್ತಿದ್ದೇವೆ. ಆದ್ರೆ ಸರ್ಕಾರ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಬೇರೆ ಬೇರೆ ದೇಶಗಳಲ್ಲಿ ಹೋರಾಟ ಆಗ್ತಿದೆ. ನೇಪಾಳದಲ್ಲಿ ಹೋರಾಟ ಆಗ್ತಿದೆ. ಆ ರೀತಿ ಕರ್ನಾಟಕದಲ್ಲಿ ಆಗಬಾರದು. ವರ್ಷಕ್ಕೆ ಲಕ್ಷ ಹುದ್ದೆ ಸೃಷ್ಟಿ ಮಾಡಬೇಕು. ಇಲ್ಲವಾದರೆ ಕರ್ನಾಟಕದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಚ್ಚರಿಕೆ ಕೊಟ್ಟರು.
ಸರ್ಕಾರ ನಿರ್ಲಕ್ಷ್ಯ ವಹಿಸದೇ ಹುದ್ದೆಗಳ ನೇಮಕ ಮಾಡಬೇಕು. ನಾವು ದೇವೇಗೌಡರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ದೇವೇಗೌಡರು ನಮಗೆ ಬೆಂಬಲ ಕೊಟ್ಟಿದ್ದಾರೆ. ಸರ್ಕಾರ ಒಳಮೀಸಲಾತಿ, ಸಮೀಕ್ಷೆಯ ನಾಟಕ ಮಾಡುತ್ತಿದೆ. ಇದರ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಓದುತ್ತಿರುವ ವಿದ್ಯಾರ್ಥಿಗಳಿಗೆ ಲೈಬ್ರರಿ ಶುಲ್ಕ ಕಟ್ಟಲು ಆಗ್ತಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಹುದ್ದೆಗಳ ನೇಮಕ ಮಾಡಬೇಕು. ಇಲ್ಲವಾದರೆ ಮತ್ತೆ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ ಅಂತ ಸರ್ಕಾರ ವಿರುದ್ಧ ಕಿಡಿಕಾರಿದರು.














