ಮನೆ ಅಪರಾಧ ಕಲಬುರಗಿ: ಕಲುಷಿತ ನೀರು ಸೇವಿಸಿ 80 ಜನ ಅಸ್ವಸ್ಥ- ಪಿಡಿಒ ಅಮಾನತು

ಕಲಬುರಗಿ: ಕಲುಷಿತ ನೀರು ಸೇವಿಸಿ 80 ಜನ ಅಸ್ವಸ್ಥ- ಪಿಡಿಒ ಅಮಾನತು

0

ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಕಲುಷಿತ ನೀರು ಕುಡಿದು 80ಕ್ಕೂ ಅಧಿಕ ಜನ ಅಸ್ವಸ್ಥಗೊಂಡ ಪ್ರಕರಣ ಸಂಬಂಧ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Join Our Whatsapp Group

ನಿಂಬರ್ಗಾ ಗ್ರಾಮದ ಭೋವಿ ಸಮಾಜ ಬಡಾವಣೆಯ ಓವರ್ ಹೆಡ್ ಟ್ಯಾಂಕ್​ದಿಂದ ಸರಬರಾಜುವಾದ ಕುಡಿಯುವ ನೀರನ್ನು ಸೇವಿಸಿ ಸೋಮವಾರ 80ಕ್ಕೂ ಅಧಿಕ ಜನರು ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡಿದ್ದರು. ತಕ್ಷಣ ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಲಾಗಿದ್ದು, ಕ್ರಮೇಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ಇಂತಹ ಅವಘಡ ಸಂಭವಿಸಲು ಗ್ರಾಪಂ ಪಂಚಾಯಿತಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೇ ಕಾರಣ. ಟ್ಯಾಂಕ್ ಸ್ವಚ್ಛಗೊಳಿಸುವಂತೆ ಅನೇಕ ಬಾರಿ ಹೇಳಿದರೂ ಯಾರು ಕೂಡ ಗಮನ ಹರಿಸದಿದ್ದಕ್ಕೆ ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ”ಘಟನೆ ಹಿನ್ನೆಲೆಯಲ್ಲಿ ಪಿಡಿಒ ಸುಕನ್ಯಾರನ್ನು ಸೇವೆಯಿಂದ ಅಮಾನತು ಮಾಡಿ ತಾಲೂಕಾಡಳಿತ ಆದೇಶ ಹೊರಡಿಸಿದೆ.‌ ಪಕ್ಕದ ಸುಂಟನೂರ ಗ್ರಾಪಂ‌ ಪಿಡಿಒಗೆ ಪ್ರಭಾರ ಅಧಿಕಾರ ವಹಿಸಲಾಗಿದೆ” ಎಂದು ಆಳಂದ ಇಓ ಮಾನಪ್ಪ ಕಟ್ಟಿಮನಿ ಮಾಹಿತಿ ನೀಡಿದ್ದಾರೆ.

ಗ್ರಾಮಕ್ಕೆ ಶಾಸಕ ಬಿ.ಆರ್.ಪಾಟೀಲ್ ಭೇಟಿ: ಗ್ರಾಮಸ್ಥರು ಅಸ್ವಸ್ಥರಾಗಿರುವ ಸುದ್ದಿ ತಿಳಿದು ಮಂಗಳವಾರ ನಿಂಬರ್ಗಾ ಗ್ರಾಮಕ್ಕೆ ದೌಡಾಯಿಸಿದ ಶಾಸಕ ಬಿ.ಆರ್.ಪಾಟೀಲ್ ನೇರವಾಗಿ ಆಸ್ಪತ್ರೆಗೆ ತೆರಳಿ, ಜನರ ಆರೋಗ್ಯ ವಿಚಾರಿಸಿ ಹಣ್ಣು ಹಂಪಲು ನೀಡಿ ಧೈರ್ಯ ತುಂಬಿದರು. ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಆಫೀಸರ್ ಡಾ.ಇರ್ಫಾನ್ ಅಲಿ ಅವರೊಂದಿಗೆ ಸಮಾಲೋಚನೆ ನಡೆಸಿ, ಜನರ ಆರೋಗ್ಯ ಸ್ಥೀತಿಗತಿಯ ಬಗ್ಗೆ ಮಾಹಿತಿ‌ ಕಲೆಹಾಕಿದರು.

ಇದಾದ ಬಳಿಕ ಶಾಸಕರು ನೀರು ಸರಬರಾಜು ಆದ ಓವರ್ ಹೆಡ್​ ಟ್ಯಾಂಕ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಗ್ರಾಪಂ‌ ಕಚೇರಿಗೆ ತೆರಳಿ ಪಂಚಾಯಿತಿ ಅಧ್ಯಕ್ಷೆ ರೇಖಾಬಾಯಿ ಚವ್ಹಾಣ ಮತ್ತು ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದರು. ಈ ವೇಳೆ ಅಧ್ಯಕ್ಷರು ಹಾಗೂ ಸದಸ್ಯರು, ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದಿರುವ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದರು.

ನೀರಿನ ಟ್ಯಾಂಕ್ ಸ್ವಚ್ಛತೆ ಕಾಪಾಡದೆ ಇರುವುದರಿಂದ ಜನರು ಅನಾರೋಗ್ಯದಿಂದ ಬಳಲುವಂತಾಗಿದೆ. ಸರ್ಕಾರ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಅನುದಾನ ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಶುದ್ಧ ಕುಡಿಯುವ ನೀರು ನೀಡುವಂತೆ ಅಧಿಕಾರಿಗಳು‌ ಮತ್ತು ಗ್ರಾಪಂ ಅಧ್ಯಕ್ಷ ಸದಸ್ಯರಿಗೆ ಸೂಚಿಸಿದರು. ಆಳಂದ ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ್, ಇಓ ಮಾನಪ್ಪಾ ಕಟ್ಟಿಮನಿ, ನಿಂಬರ್ಗಾ ಉಪ ತಹಶೀಲ್ದಾರ್ ಮಹೇಶ ಧಮ್ಮರಗಿಡ್ಡ ಸೇರಿ ಅನೇಕರು ಹಾಜರಿದ್ದರು.

ಲೋಕಾಯುಕ್ತ ಅಧಿಕಾರಿಗಳು ಭೇಟಿ: ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇನ್ಸ್​​ಪೆಕ್ಟರ್ ಅಕ್ಕಮಹಾದೇವಿ ನೇತೃತ್ವದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ನಿಂಬರ್ಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ ಮತ್ತು ಓವರ್ ಹೆಡ್ ಟ್ಯಾಂಕ್ ಇರುವ ಪ್ರದೇಶ, ಘಟನೆ ಸಂಭವಿಸಿದ ಬಡಾವಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಎಎಸ್ಐ ರಾಜಶೇಖರ್, ಹೆಡ್ ಕಾನ್ಸ್​ಟೇಬಲ್ ಹನುಮಂತ, ಮಹಿಳಾ ಸಿಬ್ಬಂದಿ ಮದುಮತಿ ಇದ್ದರು.