ಮನೆ ರಾಜ್ಯ ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದ ಅವಶ್ಯಕ: ಯುಪಿ ಸಿಎಂ ಯೋಗಿ...

ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದ ಅವಶ್ಯಕ: ಯುಪಿ ಸಿಎಂ ಯೋಗಿ ಆದಿತ್ಯನಾಥ್

0

ಮಂಡ್ಯ: ಕರ್ನಾಟಕ ರಾಜ್ಯ ಈಗಾಗಲೇ ಅಭಿವೃದ್ಧಿಯನ್ನು ಹೊಂದಿರುವ ರಾಜ್ಯವಾಗಿದೆ. ಆದರೂ, ದೇಶದ ಅಭಿವೃದ್ಧಿಯಲ್ಲಿ ಮತ್ತಷ್ಟು ಕೈ ಜೋಡಿಸಲು ಕರ್ನಾಟಕಕ್ಕೆ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆಯಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.

Join Our Whatsapp Group

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅಶೋಕ್ ಜಯರಾಮ್ ಅವರ ವಿರುದ್ಧ ಪ್ರಚಾರ ನಡೆಸಿದರು.

ಅದಕ್ಕೂ ಮುನ್ನ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಆಗಮಿಸಿದ್ದ ಅವರು, ದೇಶದ ಅಭಿವೃದ್ಧಿಯಲ್ಲಿ ಡಬಲ್ ಇಂಜಿನ್ ಸರ್ಕಾರದ ಪಾತ್ರ ಮಹತ್ವದ್ದಾಗಿರುತ್ತದೆ. ಹಾಗಾಗಿ, ದೇಶದ ಅಭಿವೃದ್ಧಿಯ ಜೊತೆಗೆ ಕರ್ನಾಟಕವೂ ದಾಪುಗಾಲು ಹಾಕಬೇಕಾದರೆ, ರಾಜ್ಯದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂದು ಹೇಳಿದರು.

ದೇಶವು ಇಂದು ವಿಶ್ವದ 5ನೇ ಬೃಹತ್ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿಯವರ ಸಮರ್ಥ ಆಡಳಿತ. ಅವರು ಟೀಂ ಇಂಡಿಯಾ ತಂಡದ ಕ್ಯಾಪ್ಟನ್ ಇದ್ದಂತೆ. ಆ ತಂಡದಲ್ಲಿ ಕರ್ನಾಟಕದವರು ಎಷ್ಟಿದ್ದಾರೆ ಎಂಬುದನ್ನು ರಾಜ್ಯದ ಜನರು ನಿರ್ಧರಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ನದ್ದು ಫೇಲ್ಡ್ ಇಂಜಿನ್ ಎಂದು ಟೀಕಿಸಿದ ಯೋಗಿ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ ಬಂದಾಗ ಪಂಚವಾರ್ಷಿಕ ಯೋಜನೆ ಎಂಬ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ಒಂದು ಪಂಚವಾರ್ಷಿಕ ಯೋಜನೆಯಡಿ ಯಾವುದೇ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರೆ ಅದು ಸುಮಾರು ಮೂರು ನಾಲ್ಕು ಪಂಚವಾರ್ಷಿಕ ಯೋಜನೆಯವರೆಗೆ ಶಿಲಾನ್ಯಾಸದ ಹಂತದಲ್ಲೇ ಇರುತ್ತಿತ್ತು. ಅದಕ್ಕೆ ಸರಿಯಾಗ ಅನುದಾನಗಳನ್ನು ಕೊಡುತ್ತಿರಲಿಲ್ಲ. ಕಡೆಗೊಂದು ದಿನ ಆ ಯೋಜನೆಗಳು ಅನುಷ್ಠಾನಗೊಳ್ಳದೇ ಅಲ್ಲಿಗೇ ಮೊಟಕುಗೊಳ್ಳುತ್ತಿದ್ದವು ಎಂದು ಟೀಕಿಸಿದರು. ಹಾಗಾಗಿ, ಫೇಲ್ಡ್ ಇಂಜಿನ್ ಹೊಂದಿರುವ ಕಾಂಗ್ರೆಸ್ ಗೆ ಮತ ಹಾಕಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

ಕಾಂಗ್ರೆಸ್ ಧರ್ಮಾಧಾರಿತ ಮೀಸಲಾತಿ ಕಡೆಗೆ ಒಲವು ಹೊಂದಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಹಾಗಾಗಿಯೇ ಬಿಜೆಪಿ ಸರ್ಕಾರವು ಧರ್ಮಾಧಾರಿತ ಮೀಸಲಾತಿಗೆ ಕೊನೆಯನ್ನು ಹಾಡಿ, ಪರಿಶಿಷ್ಟರಿಗೆ ಹಾಗೂ ನಿಜವಾಗಿಯೂ ಮೀಸಲಾತಿ ಬೇಕಿರುವವರಿಗೆ ಮೀಸಲಾತಿಯನ್ನು ಸಮಪ್ರಮಾಣದಲ್ಲಿ ಹಂಚಲು ಮುಂದಾಗಿದೆ.

ಮತ್ತೊಂದು ಕಡೆ, ದೇಶದ್ರೋಹಿ ಸಂಸ್ಥೆಗಳಾದ ಪಿಎಫ್ಐಯಂಥ ಸಂಘಟನೆಗಳನ್ನು ನಿಷೇಧಿಸುತ್ತಿದ್ದರೆ, ಕಾಂಗ್ರೆಸ್ಸಿಗರು ಪಿಎಫ್ಐ ಪರವಾಗಿ ಮಾತನಾಡುತ್ತಾರೆ. ಅವರು ಅಧಿಕಾರಕ್ಕೆ ಬಂದರೆ ತುಷ್ಟೀಕರಣವಾಗುತ್ತದೆಯೇ ಹೊರತು ಮತ್ತೇನೂ ಅಲ್ಲ. ಇಂಥದ್ದೆಲ್ಲಾ ಈ ದೇಶದಲ್ಲಿ ಆಗಬಾರದು ಎಂದರೆ ರಾಜ್ಯದ ಜನತೆಯು ಬಿಜೆಪಿ ಮತ ನೀಡಿ, ಮತ್ತೊಮ್ಮೆ ಅಭಿವೃದ್ಧಿಗೆ ಚಾಲನೆ ನೀಡಬೇಕು ಎಂದು ಅವರು ಹೇಳಿದರು.

ಹನುಮನ ನಾಡಿನ ಜನತೆಗೆ ಆದರದ ಸ್ವಾಗತ

ಉತ್ತರ ಪ್ರದೇಶದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಸುಮಾರು 500 ವರ್ಷಗಳ ನಂತರ ಶ್ರೀರಾಮನು, ತನ್ನ ಜನ್ಮಸ್ಥಳದಲ್ಲಿ ನಿರ್ಮಾಣವಾದ ದೇಗುಲದಲ್ಲಿ ವಿರಾಜಮಾನನಾಗಲಿದ್ದಾನೆ. ಆ ಸುಂದರ ಕಾರ್ಯಕ್ರಮದಲ್ಲಿ ಶ್ರೀರಾಮನ ಬಂಟ ಹನುಮನು ಉದಯಿಸಿದ ನಾಡಾದ ಕರ್ನಾಟಕದ ಜನತೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.

ಜಯಭಾರತ ಜನನಿಯ ತನುಜಾತೆ ಹಾಡು

ಕಾರ್ಯಕ್ರಮದ ಕೊನೆಯಲ್ಲಿ, ಮಂಡ್ಯದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕನ್ನಡದಲ್ಲಿ ಹೇಳಿದ ಯೋಗಿ ಆದಿತ್ಯನಾಥ್, ಜಯಭಾರತ ಜನನಿಯ ತನುಜಾತೆ… ಜಯಹೇ ಕರ್ನಾಟಕ ಮಾತೆ ಎಂಬ ಕವಿವಾಣಿಯನ್ನು ಮೂರು ಬಾರಿ ಹೇಳಿದರು. ಜೊತೆಗೆ, ಬೋಲೋ ಭಾರತ್ ಮಾತಾ ಕೀ ಎಂದು ಮೂರು ಬಾರಿ ಉಚ್ಛರಿಸಿದಾಗ ಜನತೆಯೂ ಕ್ರಮವಾಗಿ ಮೂರು ಬಾರಿ ಜಯಕಾರ ಹಾಕಿತು. ಭಾಷಣ ಮುಗಿಸಿದರೂ ಜನರು ಯೋಗಿ… ಯೋಗಿ.. ಯೋಗಿ ಎಂದು ಜಯಘೋಷ ಹಾಕುತ್ತಿದ್ದರು.

ಹಿಂದಿನ ಲೇಖನಎಚ್’ಡಿಕೆ ವಿರುದ್ಧದ ಹಗರಣ: ಕಬಳಿಸಲಾದ ಭೂಮಿ 14 ಎಕರೆಯೋ, 71 ಎಕರೆಯೋ ಎಂದು ಪರಿಶೀಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್
ಮುಂದಿನ ಲೇಖನಮಂಡ್ಯ: ವಿಸಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದವರಲ್ಲಿ ಮತ್ತಿಬ್ಬರ ಮೃತದೇಹ ಪತ್ತೆ