ಮನೆ ಅಪರಾಧ ಗುಂಡ್ಲುಪೇಟೆಯಲ್ಲಿ ಕೇರಳದ ಲಾಟರಿ ಮಾರಾಟ: ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

ಗುಂಡ್ಲುಪೇಟೆಯಲ್ಲಿ ಕೇರಳದ ಲಾಟರಿ ಮಾರಾಟ: ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ

0

ಗುಂಡ್ಲುಪೇಟೆ (Gundlupete):  ಗುಂಡ್ಲುಪೇಟೆ, ಹಂಗಳ, ಬೇಗೂರು ಮತ್ತು ತೆರಕಣಾಂಬಿ ವ್ಯಾಪ್ತಿಯಲ್ಲಿ ಹಣದಾಸೆಗೆ ಕೇರಳದ ಲಾಟರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ, ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಕರು, ಕೂಲಿ ಕಾರ್ಮಿಕರು ಪ್ರತಿದಿನ ಲಾಟರಿ ಖರೀದಿಸಿ ಹಣ ಕಳೆದುಕೊಂಡು ಸಾಲ ಮಾಡಿದ್ದಾರೆ. ಪೊಲೀಸರು ಸೇರಿದಂತೆ ಗುಪ್ತ ಮಾಹಿತಿ ಸಿಬ್ಬಂದಿಗೆ ಲಾಟರಿ ಮಾರಾಟದ ಬಗ್ಗೆ ಮಾಹಿತಿ ಇದ್ದರೂ ತಡೆಗೆ ಕ್ರಮವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದೊಂದು ವರ್ಷದಿಂದ ಎಗ್ಗಿಲ್ಲದೆ ಲಾಟರಿ ಮಾರಾಟ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಲಾಟರಿ ಮಾರಾಟ ತಡೆಗೆ ಮುಂದಾಗಿಲ್ಲ. ತಾಲೂಕಿನ ಜನರು ನೆರೆ ರಾಜ್ಯ ಕೇರಳದ ಸುಲ್ತಾನ್‌ ಬತ್ತೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಲಿ ಮಾಡುತ್ತಾರೆ. ದುಡಿಮೆಯ ಹಣದಲ್ಲಿ ಲಾಟರಿ ಖರೀದಿಸುವುದು ಒಂದೆಡೆಯಾದರೆ, ಕೆಲ ಯುವಕರು ಸುಲ್ತಾನ್‌ ಬತ್ತೇರಿಗೆ ಕೇರಳಕ್ಕೆ ಹೋಗಿ ಲಾಟರಿ ಟಿಕೆಟ್‌ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ.

ರಾಜ್ಯದ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್‌ ಮೂಲಕವೇ ಮಾರಾಟಗಾರರು ಆಗಮಿಸುತ್ತಿದ್ದಾರೆ. ಆದರೆ ಅಧಿಕಾತಿಗಳು ಸರಿಯಾಗಿ ತಪಾಸಣೆ ನಡೆಸದಿರುವುದೇ ಲಾಟರಿ ಟಿಕೆಟ್‌ ಗುಂಡ್ಲುಪೇಟೆಗೆ ಬರಲು ಕಾರಣ ಎನ್ನಲಾಗಿದೆ.

ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಜಿಲ್ಲಾ ಅಪರಾಧ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಲಾಟರಿ ಮಾರುತ್ತಿದ್ದವರನ್ನು ಬಂಧಿಸಿದ್ದರು.

ಪೊಲೀಸರು ಲಾಟರಿ ದಂಧೆಗೆ ಕಡಿವಾಣ ಹಾಕಬೇಕು ಎಂದು ನಿವಾಸಿ ವೆಂಕಟೇಶ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ಕಳೆದ ತಿಂಗಳು ನಾಲ್ಕು ಲಾಟರಿ ಮಾರಾಟದ ಸಂಬಂಧ ಪ್ರಕರಣ ದಾಖಲಾಗಿದೆ. ಲಾಟರಿ ತಡೆ ಸಂಬಂಧ ಪೊಲೀಸರಿಗೆ ಸೂಚನೆ ನೀಡಿ ಕ್ರಮ ವಹಿಸಲು ಸೂಚನೆ ನೀಡಲಾಗುವುದು ಎಂದು ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹೇಳಿದ್ದಾರೆ.