ಬೆಂಗಳೂರು: ಕೊಲೆ ಆರೋಪಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು 50 ಲಕ್ಷ ಲಂಚ ನಿರೀಕ್ಷಿಸುತ್ತಿದ್ದಾರೆ ಎಂದು ಕೊಲೆ ಆರೋಪಿಯ ತಾಯಿಗೆ (ಥೆರೇಸಾ) ತಿಳಿಸಿದ್ದಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ವಕೀಲೆ ಬಿ.ಎಂ. ದಯೀನಾ ಬಾನು ಅವರನ್ನು ಫೆಬ್ರವರಿ 24ರವರೆಗೆ ವಿಧಾನಸೌಧ ಠಾಣೆಯ ಪೊಲೀಸರು ತನಿಖೆಗೆ ಹಾಜರಾಗಲು ಸೂಚಿಸಬಾರದು ಎಂದು ಹೈಕೋರ್ಟ್ ತಿಳಿಸಿದೆ.
ನ್ಯಾಯಾಲಯದ ನಿರ್ದೇಶನದಂತೆ ಹೈಕೋರ್ಟ್ನ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್ ರಾಜೇಶ್ವರಿ ದಾಖಲಿಸಿರುವ ದೂರಿನ ಸಂಬಂಧ ದಾಖಲಾಗಿರುವ ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ವಕೀಲೆ ಬಿ.ಎಂ. ದಯೀನಾ ಬಾನು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.
ಫೆಬ್ರವರಿ 24ರವರೆಗೆ ವಿಧಾನಸೌಧ ಪೊಲೀಸರು ತನಿಖೆಗೆ ಹಾಜರಾಗುವಂತೆ ದಯೀನಾ ಬಾನುಗೆ ಸೂಚಿಸಿಬಾರದು ಎಂದು ಆದೇಶಿಸಿರುವ ನ್ಯಾಯಾಲಯವು ಬಾನು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಈ ಹಿಂದೆ ಮಾಡಿರುವ ಆದೇಶವನ್ನು ವಿಸ್ತರಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಿಜಿಸ್ಟ್ರಾಲ್ ಜನರಲ್ ಅವರ ಲಿಖಿತ ವರದಿ ಆಧರಿಸಿ ಬಾನು ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ರಿಜಿಸ್ಟ್ರಾರ್ ಸಲ್ಲಿಸಿರುವ ಪತ್ರದಲ್ಲಿ ವಂಚನೆ ನಡೆದಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಹೀಗಾಗಿ, ವಂಚನೆ ಆರೋಪಕ್ಕೆ ಎಫ್ಐಆರ್ ದಾಖಲಿಸುವುದು ಸಂದರ್ಭ ಉದ್ಭವಿಸುವುದಿಲ್ಲ. ದೂರುದಾರರಾದ ರಿಜಿಸ್ಟ್ರಾರ್ ಜನರಲ್ ನ್ಯಾಯಾಂಗದ ಅಧಿಕಾರಿ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ. ಬಾನು ಪ್ರಾಕ್ಟೀಸ್ ಮಾಡುತ್ತಿರುವ ವಕೀಲೆಯಾಗಿದ್ದಾರೆ. ಇಂತಹ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಯಾಂತ್ರಿಕವಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಆಕ್ಷೇಪಿಸಿದರು.
ಇದಕ್ಕೆ ಸರ್ಕಾರಿ ವಕೀರು, ಅರ್ಜಿದಾರರ ಸಂಭಾಷಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಅದನ್ನು ಪರಿಶೀಲಿಸಿ ಪ್ರಕರಣವನ್ನು ನ್ಯಾಯಾಲಯ ನಿರ್ಧರಿಸಬಹುದು. ಬಾನು ಅವರು ಥೆರೆಸಾ ಜೊತೆ ಮಾತನಾಡಿದ್ದಾರೆ. ಮೊಬೈಲ್ ಸಂಭಾಷಣೆಯಲ್ಲಿ ಹಲವು ನ್ಯಾಯಮೂರ್ತಿಗಳ ಹೆಸರುಗಳು ಬಂದಿವೆ. ಸಾರ್ವಜನಿಕವಾಗಿ ಅವುಗಳನ್ನು ಹೇಳಲಾಗದು. ಬಾನು ಅವರಿಗೆ ಧ್ವನಿ ಮಾದರಿ ನೀಡಲು ನಿರ್ದೇಶಿಸಬೇಕು. ವಕೀಲರ ಸಮುದಾಯದಲ್ಲಿಯೂ ಕಪ್ಪು ಕುರಿಗಳಿವೆ. ಇಲ್ಲಿ ನ್ಯಾಯಾಂಗದ ಘನತೆಗೆ ಹಾನಿ ಮಾಡುವ ಕೆಲಸವಾಗಿದೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಘಟನೆ ನಿಜವೇ ಆದರೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯೂ ಅನ್ವಯಿಸುತ್ತದೆ ಎಂದು ಪೀಠಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ: ಥೆರೆಸಾ ಎಂಬುವರ ಪುತ್ರ 24 ವರ್ಷದ ವಿಷ್ಣು ಅಲಿಯಾಸ್ ವಿಷ್ಣುದೇವನ್ ಅವರು ಮೂರು ವರ್ಷಗಳಿಂದ (ಕೊಲೆ ಆರೋಪದಲ್ಲಿ) ಜೈಲಿನಲ್ಲಿದ್ದು, ಆತನಿಗೆ ಜಾಮೀನು ದೊರಕಿಸಲು ವಕೀಲೆ ಮರೀನಾ ಫರ್ನಾಂಡೀಸ್ 10 ಲಕ್ಷ ಪಡೆದಿದ್ದರು. ಜಾಮೀನು ಸಿಗದೇ ಇದ್ದುದರಿಂದ ಮರೀನಾ ಫರ್ನಾಂಡೀಸ್ ಅವರು 9 ಲಕ್ಷಕ್ಕೆ ಮೂರು ಚೆಕ್ಗಳನ್ನು ನೀಡಿದ್ದಾರೆ. ಆದರೆ, ಇದುವರೆಗೂ ಹಣ ಹಿಂದಿರುಗಿಸಿಲ್ಲ.
ಮರೀನಾ ಫರ್ನಾಂಡೀಸ್ ಅವರು ಆರತಿ ಎಂಬಾಕೆಯನನ್ನು ಪರಿಚಿಸಿದ್ದರು. ಆರತಿಯು ಹೈಕೋರ್ಟ್ ನ್ಯಾಯಮೂರ್ತಿ ಪರಿಚಯಿವಿದೆ ಎಂದು ಹೇಳಿಕೊಂಡು 72 ಸಾವಿರ ಪಡೆದುಕೊಂಡಿದ್ದು, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಯೀನಾ ಬಾನು ಅವರು ನ್ಯಾಯಾಧೀಶರು 50 ಲಕ್ಷ ನಿರೀಕ್ಷಿಸಿರುತ್ತಾರೆ. ಇಲ್ಲವಾದಲ್ಲಿ ಜಾಮೀನು ಪ್ರಕ್ರಿಯೆ ಬೇರೆ ವಕೀಲರಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸಿರುತ್ತಾರೆ ಎಂದಿದ್ದರು.
ಈ ಸಂಬಂಧ ಥೆರೇಸಾ ಅವರು ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಡಿಸೆಂಬರ್ 18ರಂದು ದೂರು ನೀಡಿದ್ದರು. ಈ ಸಂಬಂಧ ದಯೀನಾ ಬಾನು ವಿರುದ್ದ ಕ್ರಮಕೈಗೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಹೈಕೋರ್ಟ್ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್ ಎಂ ರಾಜೇಶ್ವರಿ ಅವರು ವಿಧಾನಸೌಧ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.














