ಮನೆ ರಾಜ್ಯ ನಾಯಕತ್ವ ಬದಲಾವಣೆ; ಹೈಕಮಾಂಡ್ ಹೇಳಿಲ್ಲ, ಸಿಎಲ್‌ಪಿಯಲ್ಲೂ ಚರ್ಚೆಯಾಗಿಲ್ಲ – ಜಿ.ಪರಮೇಶ್ವರ್

ನಾಯಕತ್ವ ಬದಲಾವಣೆ; ಹೈಕಮಾಂಡ್ ಹೇಳಿಲ್ಲ, ಸಿಎಲ್‌ಪಿಯಲ್ಲೂ ಚರ್ಚೆಯಾಗಿಲ್ಲ – ಜಿ.ಪರಮೇಶ್ವರ್

0

ಬೆಂಗಳೂರು : ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ಹೇಳಿಲ್ಲ, ಸಿಎಲ್‌ಪಿಯಲ್ಲೂ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಎಂದು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸಂಪುಟ ಪುನರ್ ರಚನೆ ಕುರಿತು ಮಾತನಾಡಿದ ಅವರು, ನಾವು ನಾವೇ ಏನೇನೋ ಹೇಳಿಕೊಂಡು ಹೋದರೆ ಅದಕ್ಕೆ ಮಹತ್ವ ಬರುತ್ತದೆಯೇ? ಈ ಬಗ್ಗೆ ಹೈಕಮಾಂಡ್‌ನವರು ಸ್ಪಷ್ಟವಾಗಿ ಹೇಳಿದಾಗ ಮಹತ್ವ ಬರುತ್ತದೆ.

ಸಂಪುಟ ಪುನರ್ ರಚನೆ ವಿಚಾರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಸೇರಿದಂತೆ ಯಾವುದನ್ನು ಸಹ ಹೈಕಮಾಂಡ್‌ನವರು ಎಲ್ಲೂ ಉಚ್ಛರಿಸಿಲ್ಲ. ಹೈಕಮಾಂಡ್‌ನವರು ಹೇಳಿದರೆ ಕೇಳುತ್ತೇವೆ. ಅವರು ಹೇಳದಿರುವ ಕಾರಣಕ್ಕಾಗಿ ಯಾವುದಕ್ಕು ಮಹತ್ವ ಕೊಡುವ ಅಗತ್ಯವಿಲ್ಲ. ಹೈಕಮಾಂಡ್‌ನವರು ಹೇಳಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚೆಯಾಗಿಲ್ಲ ಎಂದರು.

ಯಾವುದೇ ತೀರ್ಮಾನವನ್ನು ಹೈಕಮಾಂಡ್‌ನವರು ಮಾಡಬೇಕು. ಸಂಪುಟ ಪುನರ್ ರಚನೆ ಸೇರಿದಂತೆ ಬೇರೆಬೇರೆ ವಿಚಾರಗಳ ತೀರ್ಮಾನವನ್ನು ಅವರೇ ಮಾಡಬೇಕು. ಎರಡೂವರೆ ವರ್ಷ ಆಗಿರುವುದು ಅವರಿಗೆ ಗೊತ್ತಿದೆ. ಎರಡೂವರೆ ವರ್ಷಕ್ಕೆ ಮಹತ್ವ ಕೊಡುವಂತ ಅಗತ್ಯ ಇಲ್ಲ. ನಮ್ಮ ಹೈಕಮಾಂಡ್‌ನಿಂದ ನಾಯಕತ್ವ ಬದಲಾವಣೆಯ ಬಗ್ಗೆ ಯಾರು, ಏನೂ ಹೇಳಿಲ್ಲ ಎಂದು ತಿಳಿಸಿದರು.

ನಮ್ಮ ಸರ್ಕಾರವು ಎರಡೂವರೆ ವರ್ಷದ ಅವಧಿಯಲ್ಲಿ ಜನಸಮುದಾಯಕ್ಕೆ ನೀಡಿದ್ದ ಭರವಸೆಗಳನ್ನು ಆದ್ಯತೆಯ ಮೇಲೆ ಈಡೇರಿಸಿದ್ದೇವೆ ಎಂಬ ಸಮಾಧಾನವಿದೆ. ಮುಂದೆ ಹೆಚ್ಚಿನ ರೀತಿಯಲ್ಲಿ ಹಣಕಾಸಿನ ವಿಚಾರದಲ್ಲಿ ಅನವಶ್ಯಕ ಖರ್ಚುಗಳನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಹಣವನ್ನು ಕೊಡದೇ ಕಡಿಮೆ ಕೊಟ್ಟಿದೆ. ಜಿಎಸ್‌ಟಿ ಪಾಲಿನಲ್ಲಿ ಕಡಿಮೆ ನೀಡಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಗುವ ಯೋಜನೆಗಳಲ್ಲಿ ಸರಿಯಾದ ಸಮಯದಲ್ಲಿ ಅನುದಾನ ಬಿಡುಗಡೆ ಮಾಡುವುದಿಲ್ಲ. ಜಲ ಜೀವನ್ ಮಿಷನ್ ಯೋಜನೆಯ ಸಾಕಷ್ಟು ಅನುದಾನ ಬಾಕಿ ಇದೆ.

ಇಡೀ ದೇಶದಲ್ಲಿ ಮನೆಮನೆಗೆ ಗಂಗೆ, ನೀರು ತಲುಪಿಸುತ್ತೇವೆ. ಅದರ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಮುಖ್ಯಮಂತ್ರಿಗಳು ಅನುಭವಿ ಹಣಕಾಸು ಸಚಿವರು. 17ನೇ ಬಾರಿ ಬಜೆಟ್ ಮಂಡಿಸುವವರಿದ್ದಾರೆ. ಇದನ್ನೆಲ್ಲ ಚರ್ಚೆ ಮಾಡಿ, ಹಣಕಾಸಿನ ವಿಚಾರದಲ್ಲಿ ಒಂದಷ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಎಸ್‌ಐಟಿಯವರಿಗೆ ಸರ್ಕಾರದಿಂದ ಸ್ಪಷ್ಟವಾಗಿ ಹೇಳಿದ್ದೇವೆ. ವರದಿ ನೀಡುವುದು ಎಸ್‌ಐಟಿಯವರಿಗೆ ಬಿಟ್ಟದ್ದು. ವರದಿ ಬಂದ ನಂತರ ಗೊತ್ತಾಗುತ್ತದೆ. ಎಸ್‌ಐಟಿಯವರು ಸರ್ಕಾರಕ್ಕೆ ವರದಿ ಕೊಡಲೇಬೇಕಾಗುತ್ತದೆ. ಪ್ರಕರಣದ ವಾಸ್ತವಾಂಶ ಏನಿದೆ ಎಂಬುದನ್ನು ಸದನಕ್ಕೆ ಮಾಹಿತಿ ನೀಡಲೇಬೇಕು ಎಂದರು.