ಬೆಂಗಳೂರು : ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡುಕೊಳ್ಳುವ ಆಕಾಂಕ್ಷೆ ನಮಗೆ ಇದೆ. ಬಿಜೆಪಿ ಯಾವ ನಿಲುವು ತೆಗೆದುಕೊಳ್ಳುತ್ತೋ ಅದರ ಮೇಲೆ ನಾವು ತೀರ್ಮಾನ ಮಾಡ್ತೀವಿ ಅಂತ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡ ತಿಳಿಸಿದ್ದಾರೆ.
ಮೈತ್ರಿ ಬಗ್ಗೆ ಜೆಪಿ ಭವನದಲ್ಲಿ ಮಾತಾಡಿದ ಅವರು, ನಾವು ಎನ್ಡಿಎ ಭಾಗವಾಗಿದ್ದೇವೆ. ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕು ಅನ್ನೋದು ನಮ್ಮ ಆಕಾಂಕ್ಷೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಅಂತಿಮವಾಗಿ ಒಂದು ನಿರ್ಣಯ ಆಗಬೇಕು. ಬಿಜೆಪಿ ರಾಷ್ಟ್ರೀಯ ಪಕ್ಷ. ನಮ್ಮದು ಪ್ರಾದೇಶಿಕ ಪಕ್ಷ. ಹೀಗಾಗಿ ಅವರು ಏನು ನಿರ್ಧಾರ ಮಾಡುತ್ತಾರೋ, ಅವರ ಭಾವನೆ ಹೇಳಿದ ಬಳಿಕ ನಾವು ಹೆಜ್ಜೆ ಇಡುತ್ತೇವೆ ಎಂದರು.
ಸಂಸತ್ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಾವು ಒಟ್ಟಾಗಿ ಹೋಗುತ್ತೇವೆ. ಆದರೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಕಡಿಮೆ ಸೀಟು ಇರುತ್ತದೆ. ಹಂಚಿಕೆ ಮಾಡೋದು ಕಷ್ಟ ಆಗಬಹುದು. ಆದರೆ ನಾವು ಮೈತ್ರಿಯಾಗಿ ಹೋಗಬೇಕು ಅಂತ ಪ್ರಯತ್ನ ಮಾಡುತ್ತೇವೆ.
ಕುಮಾರಸ್ವಾಮಿ ಅವರು ಬಂದ ಮೇಲೆ ಅಂತಿಮ ರೂಪುರೇಷೆ ಆಗುತ್ತದೆ. ಕುಮಾರಸ್ವಾಮಿ ಕೇಂದ್ರದ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿಕೊಂಡು ಬರುತ್ತಾರೆ. ಅವರು ಬಂದ ಮೇಲೆ ಯಾವ ರೀತಿ ಹೋಗಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು.














