ಮನೆ ಕಾನೂನು ಕಿರುಗಾವಲಿನಲ್ಲಿ ಕತ್ತು ಕೊಯ್ದು ಪತ್ನಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

ಕಿರುಗಾವಲಿನಲ್ಲಿ ಕತ್ತು ಕೊಯ್ದು ಪತ್ನಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

0

ಮಳವಳ್ಳಿ:ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಪತಿಗೆ ಮಂಡ್ಯದ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಲ್ಕುಣಿ ಗ್ರಾಮದ ಲೇಟ್ ನಿಂಗಯ್ಯರ ಮಗ ಕುಮಾರಸ್ವಾಮಿ ಅಲಿಯಾಸ್ ಕುಮಾರ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2019 ಜೂನ್ ತಿಂಗಳಲ್ಲಿ ಕಿರುಗಾವಲು ಗ್ರಾಮದ ತವರು ಮನೆಯಲ್ಲಿದ್ದ ಪತ್ನಿ ಸೌಮ್ಯಳ ಕತ್ತನ್ನು ಆಕ್ಷನ್ ಬ್ಲೇಡ್ ನಲ್ಲಿ ಕುಯ್ದು ಕೊಲೆ ಮಾಡಿದ್ದನು. ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಕುಮಾರಸ್ವಾಮಿ ಅಲಿಯಾಸ್ ಕುಮಾರ್ ಗೆ ಕಿರುಗಾವಲು ಗ್ರಾಮದ ರಾಜಣ್ಣರ ಹಿರಿಯ ಮಗಳು ಸೌಮ್ಯಳನ್ನು 2009 ಮೇ 03 ರಂದು ವಿವಾಹ ಮಾಡಿಕೊಟ್ಟಿದ್ದರು.ಮದುವೆಯಾದ ನಂತರ ಕುಮಾರಸ್ವಾಮಿ ಸ್ವಲ್ಫ ದಿನಗಳ ಕಾಲ ಚೆನ್ನಾಗಿ ನೋಡಿಕೊಂಡಿದ್ದು,ನಂತರದ ದಿನಗಳಲ್ಲಿ ಸೌಮ್ಯಾಳ ಜೊತೆ ಜಗಳ ತೆಗೆದು ಕುಡಿದು ಬಂದು ಗಲಾಟೆ ಮಾಡುತ್ತಿದ್ದುದ್ದರಿಂದ,ಸೌಮ್ಯ 2019ರ ಸಾಲಿನ ಶಿವರಾತ್ರಿ ಹಬ್ಬದ ದಿನ ಮಕ್ಕಳಾದ ಬಿಂದುಧರ ಹಾಗೂ ಯಮುನಾಳನ್ನು ಕರೆದುಕೊಂಡು ತವರು ಮನೆಯಾದ ಕಿರುಗಾವಲಿಗೆ ಬಂದು ತನ್ನ ತಂದೆ ತಾಯಿಯೊಂದಿಗೆ ವಾಸವಾಗಿದ್ದರು.

ಕಿರುಗಾವಲಿನಿಂದ ಸೌಮ್ಯ ಮಳವಳ್ಳಿಯ ಬಟ್ಟೆ ಅಂಗಡಿ ಕೆಲಸಕ್ಕೆ ಹೋಗಿ ಬರುತ್ತ್ತಿದ್ದಳು. 2019 ಜೂನ್ 23 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಕುಮಾರಸ್ವಾಮಿ ಸೌಮ್ಯಾ ವಾಸವಾಗಿದ್ದ ರಾಜಣ್ಣನವರ ಮನೆಗೆ ಬಂದು ಊಟ ಮಾಡಿ,ಹಿಂದಿನ ಮನೆಯಲ್ಲಿ ಪತ್ನಿ ಸೌಮ್ಯ ಒಟ್ಟಿಗೆ ಮಲಗಿದ್ದು,ಮಾರನೇ ದಿನ ಬೆಳಿಗ್ಗೆ 6.50 ಗಂಟೆಯ ಸಮಯದಲ್ಲಿ ಆಕ್ಸಲ್ ಬ್ಲೇಡ್‌ನಿಂದ ಸೌಮ್ಯಾಳ ಕತ್ತನ್ನು ಕೂಯ್ದು ಕೊಲೆ ಮಾಡಿದ್ದನ್ನು ಈ ಸಂಬಂಧ ಪೊಲೀಸರು ನಡೆಸಿದ್ದ ತನಿಖೆ ಹಾಗೂ ಸಾಕ್ಷ್ಯದಾರಗಳಿಂದ ಧೃಡಪಟ್ಟ ಮೇರೆಗೆ ಮಳವಳ್ಳಿ ತನಿಖಾಧಿಕಾರಿಯಾದ ಸಿ.ಪಿ.ಐ ಧರ್ಮೇಂದ್ರ ಅವರು ಆರೋಪಿ ಕುಮಾರಸ್ವಾಮಿ @ ಕುಮಾರ ವಿರುದ್ದ ಭಾದಂಸ ಎ ಕಲಂ. 498(ಎ), 302 ರ ಅಡಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣ ಸಂಬಂಧಿಸಿದಂತೆ ಮಂಡ್ಯದ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾದ ನಿರ್ಮಲ.ಕೆ ರವರ ಮುಂದೆ ವಿಚಾರಣೆ ನಡೆದು,ಆರೋಪಿ ಕುಮಾರಸ್ವಾಮಿ ಅಲಿಯಾಸ್ ಕುಮಾರನಿಗೆ ಭಾದಂಸಎ ಕಲಂ. 302 ರ ಅಡಿಯಲ್ಲಿನ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು 40,000/- ರೂ.ದಂಡವನ್ನು ವಿಧಿಸಿದ್ದು, ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿರುತ್ತಾರೆ.

ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕ ಜಯಶ್ರೀ ಎಸ್.ಶೆಣೈ ವಾದ ಮಂಡಿಸಿದ್ದರು.