ಮನೆ ಅಪರಾಧ ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ

ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ

0

ಬೆಂಗಳೂರು: ಕೌಟುಂಬಿಕ ಕಾರಣಗಳಿಂದ ಮನನೊಂದ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಎಂ.ಜಿ. ಸೋಮಶೇಖರ್‌(47) ಆತ್ಮಹತ್ಯೆ ಮಾಡಿಕೊಂಡವರು.

ಭಾನುವಾರ ರಾತ್ರಿ 11 ಗಂಟೆಗೆ ಸೋಮಶೇಖರ್‌ ಮನೆಯ ಕೋಣೆಯಲ್ಲೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದನ್ನು ಗಮನಿಸಿದ ಪತ್ನಿ ಹಾಗೂ ಮಕ್ಕಳು ನೇಣಿನ ಕುಣಿಕೆಯಿಂದ ಕೆಳಗೆ ಇಳಿಸಿ, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ 11 ಗಂಟೆಗೆ ಸೋಮಶೇಖರ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತ ಸೋಮಶೇಖರ್‌ ಲಾರಿ ವ್ಯವಹಾರ ಮಾಡುತ್ತಿದ್ದು, 2005ನೇ ಸಾಲಿನಲ್ಲಿ ಪವಿತ್ರಾ ಎಂಬವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದರು. ಪಿಯುಸಿ ಮುಗಿಸಿದ್ದ ಪವಿತ್ರಾಳನ್ನು ಮದುವೆ ಬಳಿಕ ಸೋಮಶೇಖರ್‌ ಕಾಲೇಜಿಗೆ ಸೇರಿಸಿ ಬಿ.ಕಾಂ ಓದಿಸಿದ್ದರು. ಬಳಿಕ ಪವಿತ್ರಾ ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಕೌಟುಂಬಿಕ ಕಾರಣಗಳಿಗೆ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂಬುದು ಗೊತ್ತಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಮತ್ತೂಂದೆಡೆ ಘಟನೆ ಸಂಬಂಧ ಮೃತ ಸೋಮಶೇಖರ್‌ ತಂದೆ ಗಿರಿ ಗೌಡ ಮಹಾಲಕ್ಷ್ಮೀ ಲೇಔಟ್‌ ಠಾಣೆಗೆ ದೂರು ನೀಡಿದ್ದಾರೆ. ಮಗ ಮತ್ತು ಸೊಸೆ ಕೌಟುಂಬಿಕ ಕಾರಣಗಳಿಂದ ಜಗಳ ಮಾಡಿಕೊಂಡಿದ್ದರು. ಅದರಿಂದ ಬೇಸರಗೊಂಡು ಮಗ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಮಗನ ಸಾವಿನ ಬಗ್ಗೆ ನಮಗೆ ಯಾರ ಮೇಲೆಯೂ ಅನುಮಾನವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸೋಮಶೇಖರ್‌ ಸಾವಿಗೆ ಪತ್ನಿ, ಮಾಜಿ ಕುಲಸಚಿವರೇ ಕಾರಣ: ಸಂಬಂಧಿ ಆರೋಪ :

ಮೃತ ಸೋಮಶೇಖರ್‌ ಪತ್ನಿ ಪವಿತ್ರಾಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಸಚಿವರೊಬ್ಬರ ಜತೆಗೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಸೋಮಶೇಖರ್‌ಗೆ ಗೊತ್ತಾಗಿ ಆತನ ಸಂಪರ್ಕ ಕಡಿದುಕೊಳ್ಳುವಂತೆ ಹಲವು ಬಾರಿ ಹೇಳಿದ್ದರು. ಆದರೂ ಪವಿತ್ರಾ ಆತನೊಂದಿಗೆ ಅಕ್ರಮ ಸಂಬಂಧ ಮುಂದುವರಿಸಿದ್ದರು. ಅದರಿಂದ ಸೋಮಶೇಖರ್‌ ಚಿತ್ರಹಿಂಸೆ ಅನುಭವಿಸಿದ್ದರು. ಸೋಮಶೇಖರ್‌ ಆತ್ಮಹತ್ಯೆಗೆ ಪತ್ನಿ ಪವಿತ್ರಾ ಹಾಗೂ ಮಾಜಿ ಕುಲಸಚಿವನೇ ಕಾರಣ ಎಂದು ಮೃತನ ತಂಗಿಯ ಪತಿ ನಾಗರಾಜು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.