ಮಡಿಕೇರಿ: ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಕೋಟೆ ಮಾರಿಯಮ್ಮ ದೇವಸ್ಥಾನ ಬಾಗಿಲು ಮುರಿದು ಹುಂಡಿ ಒಡೆದು 2.5 ಲಕ್ಷ ರೂ ನಗದು ಮತ್ತು ಚಿನ್ನಾಭರಣಗಳನ್ನ ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರು ಇದೇ ಆಗಸ್ಟ್ 16 ರಂದು ದೋಚಿದ್ದಾರೆ.
ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.
ಅಲ್ತಾಬ್ ಅಲಿ ಹಾಗೂ ಮೀರ್ ಹುಸೇನ್ ಬಂಧಿತ ಆರೋಪಿಗಳು.
ದುಷ್ಕರ್ಮಿಗಳು ಸಿಸಿಟಿವಿಯನ್ನ ಬೇರೆಡೆ ತಿರುಗಿಸಿ ಕೃತ್ಯವೆಸಗಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಮಡಿಕೇರಿ ನಗರ ಪೊಲೀಸರು ನಗರದ ಎಲ್ಲಾ ಆಯಾ ಕಟ್ಟಿನ ಸಿಸಿಟಿವಿಗಳನ್ನ ಪರಿಶೀಲಿಸಿ ತನಿಖೆ ನಡೆಸಿದ್ದರು. ಈ ಸಂದರ್ಭ ಇಬ್ಬರು ವ್ಯಕ್ತಿಗಳ ಮೇಲೆ ಶಂಕೆ ಬಂದ ಹಿನ್ನೆಲೆಯಲ್ಲಿ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.
ಅಲ್ತಾಬ್ ಮೂರ್ನಾಡು ಸಮೀಪದ ಎಸ್ಟೇಟ್ ಒಂದರಲ್ಲಿ ಕಾರ್ಮಿಕನಾಗಿದ್ದರೆ, ಮೀರ್ ಹುಸೇನ್ ಕಳ್ಳತನ ಮಾಡಲೆಂದೇ ಅಸ್ಸಾಂನಿಂದ ಇಲ್ಲಿಗೆ ಬಂದಿದ್ದ. ಬಂಧಿತರಿಂದ ಮೂರು ಗ್ರಾಮ್ ಚಿನ್ನ, 160 ಗ್ರಾಂ ಬೆಳ್ಳಿ ಹಾಗೂ 95 ಸಾವಿರ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ನಿಂದ ಬರುವ ಕಾರ್ಮಿಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಈ ತರಹ ಅಪರಾಧಿ ಕೃತ್ಯಗಳಲ್ಲಿ ಕಾರ್ಮಿಕರು ಸಿಲುಕಿಕೊಂಡರೆ ಅಂತಹ ಎಸ್ಟೇಟ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.














