ಮನೆ ಅಪರಾಧ ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಸಾವಿನ ಹಿಂದೆ ಅವಳ...

ಮಹೇಂದ್ರ ರೆಡ್ಡಿಗೆ ಬೇರೆ ಯುವತಿ ಜೊತೆ ಸಂಬಂಧ ಶಂಕೆ – ವೈದ್ಯೆ ಸಾವಿನ ಹಿಂದೆ ಅವಳ ನೆರಳು..

0

ಬೆಂಗಳೂರು : ಅನಸ್ತೇಶಿಯಾ ಕೊಟ್ಟು ವೈದ್ಯ ಪತ್ನಿಯನ್ನೇ ವೈದ್ಯ ಪತಿ ಮರ್ಡರ್ ಮಾಡಿದ ಘಟನೆ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ. 11 ತಿಂಗಳ ಹಿಂದೆ ಡಾ.ಕೃತಿಕಾ ರೆಡ್ಡಿ-ಡಾ.ಮಹೇಂದ್ರ ರೆಡ್ಡಿಗೆ ಮದುವೆಯಾಗಿತ್ತು. ಇಬ್ಬರೂ ವಿಕ್ಟೋರಿಯಾದಲ್ಲಿ ಕೆಲಸ ಮಾಡ್ತಿದ್ದರು. ಇದೀಗ ಕೃತಿಕಾ ಸಾವಿನ ನಂತ್ರ ಸ್ಫೋಟಕ ರಹಸ್ಯಗಳು ಬೆಳಿಕಿಗೆ ಬಂದಿವೆ.

ಗಂಡನಿಂದಲೇ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಆಗರ್ಭ ಶ್ರೀಮಂತೆ. ಕುಟುಂಬದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ತಂದೆ ಮುನಿರೆಡ್ಡಿ ನೂರಾರು ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಮುನ್ನೇಕೊಳಲುವಿನಲ್ಲಿ ಮುನಿರೆಡ್ಡಿ ಜಮೀನ್ದಾರರಾಗಿದ್ದು, ತಿಂಗಳಿಗೆ ಹತ್ತಾರು ಲಕ್ಷ ಬಾಡಿಗೆಯೇ ಬರುತ್ತೆ.

ಹೀಗಾಗಿ ಮಗಳನ್ನ ಅದ್ಧೂರಿಯಾಗಿಯೇ ಮದ್ವೆ ಮಾಡಿಕೊಟ್ಟಿದ್ದರು. ಇತ್ತ ಕೊಲೆಗಡುಕ ಡಾಕ್ಟರ್‌ ಮಹೇಂದ್ರ ರೆಡ್ಡಿ ಕುಟುಂಬ ಕೂಡ ಕಡಿಮೆ ಏನಿರಲಿಲ್ಲ. ಆದ್ರೂ ಮಹೇಂದ್ರ ಕ್ಲಿನಿಕ್ ಆರಂಭಿಸಲು ಮುನಿರೆಡ್ಡಿಯೇ ಹಣಕಾಸಿನ ನೆರವು ನೀಡಿದ್ರು ಎಂದು ತಿಳಿದುಬಂದಿದೆ.

ಈ ನಡುವೆ ಮಹೇಂದ್ರ ರೆಡ್ಡಿಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಅಕ್ರಮ ಸಂಬಂಧದಿಂದಲೇ ಮಗಳನ್ನು ಕೊಲೆ ಮಾಡಿರುವುದಾಗಿ ವೈದ್ಯ ಪತಿ ವಿರುದ್ಧ ಕೃತಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಅಕ್ರಮ ಸಂಬಂಧ ಇರೋದು ದೃಢವಾದಂತೆ ಕಾಣ್ತಿದೆ. ಆದ್ರೆ ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆಯೇ ಅನ್ನೋದು ಇನ್ನೂ ನಿಗೂಢ. ಹೀಗಾಗಿ ಹಲವು ಆಯಾಮಗಳಲ್ಲಿ ಮಾರತ್ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.