ಹಾಸನ : ಎಣ್ಣೆ ಮತ್ತಲ್ಲಿ ಸ್ನೇಹಿತನನ್ನು ಹತ್ಯೆಗೈದು ಸೆಲ್ಫಿ ವೀಡಿಯೋ ಮಾಡಿದ್ದ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಲ್ಲಾಸ್ (21) ಎಂದು ಗುರುತಿಸಲಾಗಿದೆ.
ಈತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಸ್ನೇಹಿತ ಕೀರ್ತಿಯನ್ನು ಡಿ.8 ರಂದು ಕೊಲೆಗೈದಿದ್ದ. ಈ ಇಬ್ಬರು ಆಟೋ ಚಾಲಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು.
ಅತಿಯಾಗಿ ಮದ್ಯ ಸೇವಿಸಿ ಮಾತನಾಡುವಾಗ ಉಲ್ಲಾಸ್ ಕೆನ್ನೆಗೆ ಕೀರ್ತಿ ಬಾರಿಸಿದ್ದ. ಇದರಿಂದ ಕೋಪಗೊಂಡಿದ್ದ ಉಲ್ಲಾಸ್, ಮತ್ತೆ ಕುಡಿಯಲು ಆಟೋದಲ್ಲಿ ಕೀರ್ತಿ ಜೊತೆ ಇನ್ನಿಬ್ಬರನ್ನು ಕರೆದೊಯ್ದಿದ್ದ. ಬಳಿಕ ಜಗಳ ಆರಂಭಿಸಿ ಕೀರ್ತಿ ಮೇಲೆ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಮದ್ಯದ ನಶೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದ.
ಡಿ.9 ರಂದು ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿಗಳಿಗೆ ಶೋಧ ನಡೆಸಿದ್ದರು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.















