ಮನೆ ಸುದ್ದಿ ಜಾಲ ಮಂಗಳೂರು: ಭಾರೀ ಮಳೆಗೆ ತತ್ತರ, ಮನೆಗಳ ಮೇಲೆ ಗುಡ್ಡ ಕುಸಿತ, 6 ವರ್ಷದ ಬಾಲಕಿ ದುರ್ಮರಣ!

ಮಂಗಳೂರು: ಭಾರೀ ಮಳೆಗೆ ತತ್ತರ, ಮನೆಗಳ ಮೇಲೆ ಗುಡ್ಡ ಕುಸಿತ, 6 ವರ್ಷದ ಬಾಲಕಿ ದುರ್ಮರಣ!

0

ಮಂಗಳೂರು: ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಎರಡು ಕಡೆಗಳಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಪರಿಣಾಮವಾಗಿ ಒಂದೇ ಕುಟುಂಬದ ಐವರು ಮಣ್ಣಿನ ಅವಶೇಷಗಳಡಿ ಸಿಲುಕಿದ ಘಟನೆ ಸಂಭವಿಸಿದೆ. ಇದೇ ವೇಳೆ, ಮತ್ತೊಂದು ಪ್ರದೇಶದಲ್ಲಿ ಕಂಪೌಂಡ್ ಗೋಡೆ ಕುಸಿತದಿಂದ 6 ವರ್ಷದ ಬಾಲಕಿ ಮೃತಪಟ್ಟಿರುವುದು ದುರಂತ.

ಮೋಂಟೆಪದವಿನಲ್ಲಿ ಗುಡ್ಡ ಕುಸಿತ ಸಂಭವಿಸಿ ಐವರು ಅವಶೇಷಗಳಡಿ ಸಿಲುಕಿದರೆಂದು ವರದಿಯಾಗಿದೆ. ಈ ಪೈಕಿ ಇಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಉಳಿದ ಮೂವರಿಗಾಗಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಯಾಚರಣೆಗೆ ನೂರಕ್ಕೂ ಹೆಚ್ಚು ಸಿಬ್ಬಂದಿ ಬಳಸಲಾಗುತ್ತಿದ್ದು, ನೆರೆ ನೀರಿನ ಮಧ್ಯೆ ವಿಘ್ನವಿಲ್ಲದೆ ಕಾರ್ಯಚರಣೆ ಸಾಗುತ್ತಿದೆ.

ದೇರಳಕಟ್ಟೆಯಲ್ಲಿ ಕಂಪೌಂಡ್ ಗೋಡೆ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ, ಮನೆಯೊಳಗಿದ್ದ 6 ವರ್ಷದ ಬಾಲಕಿ ಫಾತಿಮಾ ನಯೀಮ ಮೃತಪಟ್ಟಿದ್ದಾಳೆ. ಅವಳನ್ನು ಗಂಭೀರ ಸ್ಥಿತಿಯಲ್ಲಿ ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮಳೆಯಿಂದಾಗಿ ಮಂಗಳೂರಿನ ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರಸ್ತೆ, ತಲಪಾಡಿ, ಪಾವೂರು, ಹರೇಕಳ, ಉಳಿಯ ಮೊದಲಾದ ಪ್ರದೇಶಗಳು ಜಲಾವೃತಗೊಂಡಿವೆ. ಕಲ್ಲಾಪು ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆನೀರಿನಿಂದ ಜನರ ಜೀವನ ಕಷ್ಟಕರವಾಗಿದೆ. ತಲಪಾಡಿಯಲ್ಲಿ ಒಂದು ಮನೆಗೆ ನೀರು ನುಗ್ಗಿ ಭಾರಿ ಹಾನಿಯಾಗಿದೆ. ತಕ್ಷಣದ ನಿರ್ಧಾರವಾಗಿ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಗ್ರಾಮ ಲೆಕ್ಕಿಗ ಸುರೇಶ್ ಹಾಗೂ ಇತರ ಅಧಿಕಾರಿಗಳು ರಾತ್ರಿಯಲ್ಲೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ಕಾರ್ಯಗಳೂ ಪ್ರಾರಂಭವಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮೇ 30ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೂನ್ 2ರವರೆಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ.