ಮನೆ ರಾಷ್ಟ್ರೀಯ ಮನ್‌ ಕಿ ಬಾತ್‌ ನಲ್ಲಿ ಜಲಸಂರಕ್ಷಣೆ ಪ್ರತಿಪಾದಿಸಿದ ಪ್ರಧಾನಿ ಮೋದಿ

ಮನ್‌ ಕಿ ಬಾತ್‌ ನಲ್ಲಿ ಜಲಸಂರಕ್ಷಣೆ ಪ್ರತಿಪಾದಿಸಿದ ಪ್ರಧಾನಿ ಮೋದಿ

0

ನವದೆಹಲಿ (New Delhi)-ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಅವರು ‘ಮನ್ ಕಿ ಬಾತ್’ನಲ್ಲಿ (Mann ki Baat) ದೇಶವನ್ನು ಉದ್ದೇಶಿಸಿ ಮಾತನಾಡಿ  ಜಲಸಂರಕ್ಷಣೆ ಪ್ರತಿಪಾದನೆ ಮಾಡಿದರು.

‘ಸ್ನೇಹಿತರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ, ದೇಶದ ಸಂಕಲ್ಪಗಳಲ್ಲಿ ಜಲ ಸಂರಕ್ಷಣೆಯು ಒಂದಾಗಿರಲಿ. ನೀರು ಪ್ರತಿಯೊಂದು ಜೀವಿಗಳ ಮೂಲಭೂತ ಅಗತ್ಯ ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದು ಪ್ರಮುಖ ನೈಸರ್ಗಿಕ ಸಂಪನ್ಮೂಲ ಅದನ್ನು ಕಾಪಾಡಿಕೊಂಡು ಉಳಿಸಿಕೊಂಡು ಹೋಗಬೇಕು ಎಂದರು.

ವಾಲ್ಮೀಕಿ ರಾಮಾಯಣದಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಲಾಗಿತ್ತು. ಹರಪ್ಪ ನಾಗರಿಕತೆಯ ಸಮಯದಲ್ಲಿ, ನೀರನ್ನು ಉಳಿಸಲು ಸುಧಾರಿತ ಎಂಜಿನಿಯರಿಂಗ್ ವ್ಯವಸ್ಥೆಯೂ ಇತ್ತು. ಎಲ್ಲರೂ ನೀರು ಉಳಿಸುವ ಮೂಲಕ ಜೀವಗಳನ್ನು ಉಳಿಸೋಣ’ ಎಂದು ಹೇಳಿದರು.

ಜನರು ‘ಕ್ಯಾಶ್‌ಲೆಸ್’ ವ್ಯವಹಾರಕ್ಕೆ ಆದ್ಯತೆ ನೀಡಬೇಕು. ಈಗ ಸಣ್ಣ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಜನರು ಯುಪಿಐ ಬಳಸುತ್ತಿದ್ದಾರೆ. ಇದು ವ್ಯಾಪಾರಿಗಳು ಮತ್ತು ಗ್ರಾಹಕರಿಬ್ಬರಿಗೂ ಅನುಕೂಲಕಾರಿ. ಆನ್‌ಲೈನ್ ಪಾವತಿಯು ಡಿಜಿಟಲ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರತಿದಿನ ₹20,000 ಕೋಟಿ ಮೊತ್ತದ ಆನ್‌ಲೈನ್ ವಹಿವಾಟು ನಡೆಯುತ್ತಿವೆ‘ ಎಂದು ಅವರು ತಿಳಿಸಿದರು.

ಗಣಿತಕ್ಕೆ ಭಾರತ ನೀಡಿದ ಕೊಡುಗೆಯನ್ನೂ ಸ್ಮರಿಸಿದ ಮೋದಿ ಅವರು, ‘ಗಣಿತಶಾಸ್ತ್ರವು ಭಾರತೀಯರಿಗೆ ಅಪ್ಯಾಯಮಾನವಾದ ವಿಷಯ. ಭಾರತೀಯರಾದ ನಮಗೆ ಗಣಿತವು ಎಂದಿಗೂ ಕಷ್ಟಕರವಾದ ವಿಷಯವಾಗಿರಲಿಲ್ಲ. ಇದಕ್ಕೆ ನಮ್ಮ ವೇದ ಗಣಿತವೂ ಕಾರಣ. ನಾಗರಿಕರು ತಮ್ಮ ಮಕ್ಕಳಿಗೆ ವೇದ ಗಣಿತವನ್ನು ಕಲಿಸಬೇಕು. ವೇದ ಗಣಿತದಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುವುದು ಮಾತ್ರವಲ್ಲ, ಅವರ ವಿಶ್ಲೇಷಣಾ ಸಾಮರ್ಥವೂ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಗಣಿತದ ಬಗ್ಗೆ ಇರುವ ಅಲ್ಪ ಪ್ರಮಾಣದ ಭಯವನ್ನು ವೇದಗಣಿತ ಹೋಗಲಾಡಿಸುತ್ತದೆ’. ‘ಈಗ ವಿಜ್ಞಾನಿಗಳು ‘ಎವೆರಿಥಿಂಗ್ ಥಿಯರಿ’ ಬಗ್ಗೆ ಚರ್ಚಿಸುತ್ತಿದ್ದಾರೆ. ಅದರಲ್ಲಿ, ಬ್ರಹ್ಮಾಂಡದಲ್ಲಿರುವ ಎಲ್ಲವನ್ನೂ ಒಟ್ಟುಗೂಡಿಸಬಹುದಾಗಿದೆ. ಆದರೆ, ಭಾರತವು ಗಣಿತ ಶಾಸ್ತ್ರಕ್ಕೆ ‘ಸೊನ್ನೆ’ಯನ್ನು ಕೊಡುಗೆಯಾಗಿ ನೀಡಿದೆ. ಈ ಮೂಲಕ ಅನಂತತೆಯ ಕಲ್ಪನೆಯನ್ನು ನಾವು ಅನ್ವೇಷಿಸಿದ್ದೇವೆ. ವೇದಗಳಲ್ಲಿ ಗಣಿತಶಾಸ್ತ್ರದ ಎಣಿಕೆಯು ಬಿಲಿಯನ್ ಮತ್ತು ಟ್ರಿಲಿಯನ್‌ಗಳನ್ನು ಮೀರುವಂಥದ್ದು’ ಎಂದು ಮೋದಿ ಹೇಳಿದರು.

ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ‘ಪ್ರಧಾನಮಂತ್ರಿ ಸಂಗ್ರಹಾಲಯವನ್ನು ತಮ್ಮ ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ ಸಂಗ್ರಹಾಲಯವನ್ನು ಬಣ್ಣಿಸಿದರು. ಇದೆಲ್ಲದರ ನಡುವೆಯೂ ನಾವು ಕೊರೊನಾದ ಬಗ್ಗೆ ಎಚ್ಚರದಿಂದಿರಬೇಕು. ಸೋಂಕು ನಿಯಂತ್ರಣಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.