ಮೈಸೂರು : ದಸರಾ ಜಂಬೂಸವಾರಿ ದಿನ ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಜೊತೆ ತಮ್ಮ ಮೊಮ್ಮಗನನ್ನೂ ಕರೆದು ಕೊಂಡು ಹೋದ ನಡೆಗೆ ಆಕ್ಷೇಪ ವ್ಯಕ್ತವಾದ ಕುರಿತು ಸಚಿವ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ಅಲ್ಲಿ ಯಾವ ಪ್ರೋಟೋಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೋಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಏಕೆಂದ್ರೆ ಅದು ಪೇರೆಡ್ ಅಲ್ಲ, ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಅರಮನೆ ಹೊರ ಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನಂದಿ ಧ್ವಜ ಪೂಜೆ ಮುಗಿಸಿ, ಅರಮನೆಯ ಆವರಣಕ್ಕೆ ಗಣ್ಯರು ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಆಗಮಿಸಿದ್ದರು. ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಅವರ ಮೊಮ್ಮಗನೂ ಪ್ರಯಾಣಿಸಿದ್ದ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್ ಪಾಸ್ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ.














