ಮನೆ ರಾಷ್ಟ್ರೀಯ ಹೆಚ್ಚಿದ ಮಂಕಿಪಾಕ್ಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ತುರ್ತು ಸೂಚನೆ

ಹೆಚ್ಚಿದ ಮಂಕಿಪಾಕ್ಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ತುರ್ತು ಸೂಚನೆ

0

ನವದೆಹಲಿ (New Delhi): ಕೇರಳದಲ್ಲಿ ಮಂಕಿಪಾಕ್ಸ್‌ ನ ಎರಡನೇ ಪ್ರಕರಣ ವರದಿಯಾಗಿದೆ. ಇದರಿಂದ ಆತಂಕ ಸೃಷ್ಟಿಸಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಸೂಚನೆ ಹೊರಡಿಸಿದೆ.

ಆರೋಗ್ಯ ಸಚಿವಾಲಯ ಎಲ್ಲ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದ್ದು, ಆ ಪ್ರಕಾರ ವಿದೇಶಗಳಿಂದ ಬಂದವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕಿದೆ. ಮಾರ್ಗಸೂಚನೆಗಳ ಪ್ರಕಾರ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಇದರಿಂದ ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ.

ಮಂಕಿಪಾಕ್ಸ್‌ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣ ಪತ್ತೆಯಾದಲ್ಲಿ, ಅದನ್ನು ತಡೆಯಲು ಬೇಕಿರುವ ಎಲ್ಲಾ ಸಹಕಾರವನ್ನೂ ರಾಜ್ಯಗಳಿಗೆ ನೀಡಲಾಗುತ್ತದೆ. ಮಂಕಿಪಾಕ್ಸ್‌ ಅಷ್ಟೇನೂ ಗಂಭೀರವಾದ ಕಾಯಿಲೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದೂ ಸಚಿವಾಲಯ ಹೇಳಿದೆ.

ದುಬೈಯಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ ‘ಮಂಕಿಪಾಕ್ಸ್‌’ ತಗುಲಿರುವುದು ಖಾತರಿಯಾಗಿತ್ತು. ದೇಶದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

31 ವರ್ಷದ ವ್ಯಕ್ತಿಯು ಜುಲೈ 13ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ವ್ಯಕ್ತಿಗೆ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊಲ್ಲಂ ಜಿಲ್ಲೆಯಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಪರಿಸ್ಥಿತಿಯ ಅವಲೋಕನಕ್ಕಾಗಿ ಕೇಂದ್ರದ ವಿಶೇಷ ತಂಡವೊಂದನ್ನು ಕೇರಳಕ್ಕೆ ರವಾನಿಸಲಾಗಿತ್ತು. ವೈರಾಣುವಿನ ಪಸರಿಸುವಿಕೆ ತಡೆಯುವ ದಿಸೆಯಲ್ಲಿ ಈ ತಂಡವು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಕೆಲಸ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೋದ ವಾರ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ತಿಳಿಸಿತ್ತು.

ಹಿಂದಿನ ಲೇಖನರಾಯಚೂರಿನಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ
ಮುಂದಿನ ಲೇಖನಇಂದಿನ ದಿನದ ಚಿನ್ನ-ಬೆಳ್ಳಿ ದರದ ವಿವರ