ಮನೆ ಅಪರಾಧ ರಾಜ್ಯದಲ್ಲಿ ದಾಖಲಾದ ಪೊಲೀಸ್ ಪ್ರಕರಣಗಳಲ್ಲಿ ಶೇ 20ಕ್ಕಿಂತ ಹೆಚ್ಚು ಸೈಬರ್ ಕ್ರೈಮ್‌ಗೆ ಸಂಬಂಧಿಸಿವೆ: ಸಿಐಡಿ ಪೊಲೀಸ್...

ರಾಜ್ಯದಲ್ಲಿ ದಾಖಲಾದ ಪೊಲೀಸ್ ಪ್ರಕರಣಗಳಲ್ಲಿ ಶೇ 20ಕ್ಕಿಂತ ಹೆಚ್ಚು ಸೈಬರ್ ಕ್ರೈಮ್‌ಗೆ ಸಂಬಂಧಿಸಿವೆ: ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ

0

ಬೆಂಗಳೂರು: ಕರ್ನಾಟಕದಲ್ಲಿ ದಾಖಲಾದ ಒಟ್ಟು ಪೊಲೀಸ್ ಪ್ರಕರಣಗಳಲ್ಲಿ ಶೇ 20ರಷ್ಟು ಸೈಬರ್ ಅಪರಾಧಕ್ಕೆ ಸಂಬಂಧಿಸಿವೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ

Join Our Whatsapp Group

ಶಿಕ್ಷಣದ ಕೊರತೆಯಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಿಂದ ಬಂದಂತವರಿಂದ ಹೆಚ್ಚಿನ ಅಪರಾಧಗಳು ವರದಿಯಾಗುತ್ತಿರುವುದು ಗಮನಾರ್ಹ ಎಂದು ಅವರು ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಆಯೋಜಿಸಿದ್ದ ‘ಸೈಬರ್‌ ಭದ್ರತೆ- ಆರ್ಟಿಫಿಶಿಯಲ್ ಪ್ರಾಮುಖ್ಯತೆಯ ಸಂಭಾವ್ಯತೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸರ್ಕಾರದ ಖಾತರಿ ಯೋಜನೆಗಳಾದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಹೆಸರಿನಲ್ಲಿ ನಕಲಿ ಆ್ಯಪ್‌ಗಳನ್ನು ಸೃಷ್ಟಿಸಲಾಗಿದೆ. ಅಂತಹ ಆ್ಯಪ್‌ಗಳ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸೈಬರ್‌ಬುಲ್ಲಿಂಗ್, ಟ್ರೋಲಿಂಗ್, ಸೇಡು ತೀರಿಸಿಕೊಳ್ಳುವ ಅಶ್ಲೀಲತೆ, ಸ್ಕಿಮ್ಮಿಂಗ್, ಫಿಶಿಂಗ್ ಮತ್ತು ಇತರವುಗಳ ಅಡಿಯಲ್ಲಿ ಸುಮಾರು 45 ವಿಧದ ಸೈಬರ್‌ಕ್ರೈಮ್‌ ಪ್ರಕರಣಗಳು ವರದಿಯಾಗಿವೆ. ಕಾಲೇಜು ಬಿಟ್ಟವರು, ಉತ್ತರ ಕರ್ನಾಟಕದಂತಹ ಪ್ರದೇಶಗಳ ನಿರುದ್ಯೋಗಿ ಯುವಕರು ಸೈಬರ್ ಅಪರಾಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸೈಬರ್ ಅಪರಾಧಗಳಲ್ಲಿ ಶ್ರೀಮಂತರು ಮಾತ್ರವಲ್ಲದೆ ಬಡವರು ಕೂಡ ಗುರಿಯಾಗುತ್ತಾರೆ ಎಂದು ಸಲೀಂ ಹೇಳಿದರು.

ಆದಾಗ್ಯೂ, ಸುಮಾರು ಶೇ 70 ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸೈಬರ್ ಅಪರಾಧವನ್ನು ನಿರ್ವಹಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಆದರೆ, ಇನ್ನೂ ಹೆಚ್ಚಿನ ಸುಧಾರಣೆಯ ಅಗತ್ಯವಿದೆ ಎಂದು ಅವರು ಹೇಳಿದರು.

ಖಾಸಗಿ ಕಂಪನಿಗಳು ತಮ್ಮ ಡೇಟಾ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಮತ್ತು ಡೇಟಾ ಉಲ್ಲಂಘನೆಯನ್ನು ತಡೆಯಲು ತಮ್ಮ ಫೈರ್‌ವಾಲ್ ಸಮಗ್ರವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ ಮಾತನಾಡಿ, ಸೈಬರ್ ದಾಳಿಕೋರರು ರಾನ್ಸಮ್‌ವೇರ್ ದಾಳಿ ನಡೆಸಲು ಅತ್ಯಾಧುನಿಕ ತಂತ್ರಗಳನ್ನು ಬಳಸುತ್ತಿದ್ದಾರೆ ಮತ್ತು ರಾನ್ಸಮ್ ಮೂಲಕ ಹಣ ಗಳಿಸುತ್ತಿದ್ದಾರೆ. ತಾಂತ್ರಿಕ ಪ್ರಗತಿಯೊಂದಿಗೆ, ಸ್ವಯಂಚಾಲಿತ ಮತ್ತು ಅತ್ಯಾಧುನಿಕ ಸೈಬರ್-ದಾಳಿಗಳು ವೇಗಗೊಳ್ಳುತ್ತಿವೆ. ಹೀಗಾಗಿ, ಸೈಬರ್ ಸುರಕ್ಷತೆ ಪರಿಹಾರಗಳು ಮತ್ತು ಸೇವೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದರು.

ಹಿಂದಿನ ಲೇಖನಒಗ್ಗಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ತಯಾರಿ: ಸಚಿವ ಈಶ್ವರ್ ಖಂಡ್ರೆ
ಮುಂದಿನ ಲೇಖನಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ : ಅಪಘಾತದಲ್ಲಿ ಮೃತಪಟ್ಟ  ಚಾಲಕರ ಕಮ್ ಕಂಡಕ್ಟರ್‌ಗಳ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ