ಮನೆ ಅಂತಾರಾಷ್ಟ್ರೀಯ ಭಾರತ ಮೂಲದ ಸಿರಪ್ ಕುಡಿದು ಗ್ಯಾಂಬಿಯಾದಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವು: ತನಿಖೆಗೆ ಡಬ್ಲ್ಯೂಹೆಚ್’ಓ ಆದೇಶ

ಭಾರತ ಮೂಲದ ಸಿರಪ್ ಕುಡಿದು ಗ್ಯಾಂಬಿಯಾದಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವು: ತನಿಖೆಗೆ ಡಬ್ಲ್ಯೂಹೆಚ್’ಓ ಆದೇಶ

0

ನವದೆಹಲಿ: ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 60ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಭಾರತದಲ್ಲಿ ಉತ್ಪಾದಿಸಲಾದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದೆ.

ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧವನ್ನು ತಯಾರಿಸಿದ್ದು, ಇದನ್ನು ಆಫ್ರಿಕಾದ ಗ್ಯಾಂಬಿಯಾಗೆ ರಫ್ತು ಮಾಡಿತ್ತು. ಆ ಸಿರಪ್​ ಕುಡಿದ 66 ಮಕ್ಕಳು ಮೂತ್ರಪಿಂಡ ಸೋಂಕಿಗೆ ಗುರಿಯಾಗಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಶಂಕಿಸಿದೆ.

ಆದ್ದರಿಂದ ತಕ್ಷಣವೇ ಕಂಪನಿ ತಯಾರಿಸುವ 4 ಸಿರಪ್​ಗಳ ಮೇಲೆ ತನಿಖೆ ನಡೆಸಲು ಕೋರಿದೆ.ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯ ಮೇರೆಗೆ ತನಿಖೆ ಆರಂಭಿಸಿರುವ ಭಾರತದ ಔಷಧ ನಿಯಂತ್ರಕ ಮಂಡಳಿ. ಶೀಘ್ರವೇ ವರದಿಯನ್ನು ನೀಡಲಾಗುವುದು ಎಂದಿದೆ.

ಭಾರತೀಯ ಮೂಲದ ಕಂಪನಿ ತಯಾರಿಸಿರುವ ಸಿರಪ್​ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಇದರ ಸೇವನೆಯಿಂದ ಮಕ್ಕಳು ಕಿಡ್ನಿ ಸೋಂಕಿನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದೆ.

ಈ ಕಂಪನಿಯು ದೆಹಲಿ, ಹರಿಯಾಣದಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಕ್ಕೆ ರಾಜ್ಯ ಔಷಧ ನಿಯಂತ್ರಕರಿಂದ ಪರವಾನಗಿ ಪಡೆದಿದೆ. ಕಂಪನಿಯು ಈ ಉತ್ಪನ್ನಗಳನ್ನು ಇಲ್ಲಿಯವರೆಗೆ ಗ್ಯಾಂಬಿಯಾಕ್ಕೆ ಮಾತ್ರ ತಯಾರಿಸಿ ರಫ್ತು ಮಾಡಿದೆ ಎಂದು ತಿಳಿದುಬಂದಿದೆ.

ಔಷಧವನ್ನು ಆಮದು ಮಾಡಿಕೊಳ್ಳುವ ದೇಶಗಳು ಅದರ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕವೇ ಪಡೆಯುತ್ತವೆ. ಆಫ್ರಿಕಾದ ಗ್ಯಾಂಬಿಯಾ ಕೂಡ ಔಷಧವನ್ನು ಬಳಕೆಗೆ ನೀಡುವ ಮೊದಲು ಪರೀಕ್ಷಿಸಿ ಉತ್ಪನ್ನವನ್ನು ಆಮದು ಮಾಡಿಕೊಂಡಿದೆ. ಔಷಧಿಯ ಬಗ್ಗೆ ಆ ದೇಶ ತೃಪ್ತಿ ವ್ಯಕ್ತಪಡಿಸಿತ್ತು ಎಂದು ಕಂಪನಿಯ ಮೂಲವೊಂದು ತಿಳಿಸಿದೆ.