ಬೆಳಗಾವಿ: ಪ್ರಯಾಗ್ ರಾಜ್ ನ ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಬೆಳಗಾವಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದಾರೆ.
ನಗರದ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಇವರ ಪುತ್ರಿ ಮೇಘಾ ಹತ್ತರವಾಠ (18) ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿ ಗುರುರಾಜ ಹುದ್ದಾರ ಅವರು ಮಾಹಿತಿ ನೀಡಿದ್ದಾರೆ.
ಕಾಲ್ತುಳಿತಕ್ಕೆ ಸಿಕ್ಕು ಗಾಯಗೊಂಡಿದ್ದ ಬೆಳಗಾವಿಯ ನಾಲ್ವರನ್ನೂ ಪ್ರಯಾಗ್ರಾಜ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ತಿಳಿಸಲಾಗಿದೆ.
ಜ್ಯೋತಿ ಅವರ ಮೊಬೈಲ್ ಬೆಳಿಗ್ಗೆಯಿಂದಲೂ ರಿಂಗ್ ಆಗುತ್ತಿತ್ತು. ಆದರೆ, ಅವರು ಕರೆ ಸ್ವೀಕರಿಸಿರಲಿಲ್ಲ. ಮೊಬೈಲ್ ರಿಂಗ್ ಆಗಿದ್ದರಿಂದ ಸುರಕ್ಷಿತವಾಗಿ ಇರಬಹುದು ಎಂದು ಕುಟುಂಬದವರು ಅಂದಾಜಿಸಿದ್ದರು.
ಮೂರು ದಿನಗಳ ಹಿಂದೆ ವಡಗಾವಿ ಪ್ರದೇಶದ 13 ಜನರು ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ ಪ್ರಯಾಗ್ರಾಜ್ಗೆ ಪ್ರಯಾಣ ಬೆಳೆಸಿದ್ದರು.
ಅಲ್ಲದೇ, ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋಪಾರ್ಡೆ ಸೇರಿದಂತೆ ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಅವರ ಕುಟುಂಬದವರಿಗೆ ಬಂದಿದೆ.