ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಕೇಸ್ ಹಿನ್ನೆಲೆಯಲ್ಲಿ ಇಂದು ಧಾರವಾಡ ಹೈಕೋರ್ಟ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖಾ ವರದಿ ಸಲ್ಲಿಸಿದರು. ಅರ್ಜಿದಾರ ಸ್ನೇಹಮಯಿ ಕೃಷ್ಣ ಕೂಡ ಆಗಮಿಸಿ ಪ್ರತಿಕ್ರಿಯಿಸಿದ್ದು, ಇಂದು ಸಿಎಂ ಭವಿಷ್ಯ ನಿರ್ಧಾರವಾಗಲಿದೆ.
ಧಾರವಾಡ ಹೈಕೋರ್ಟ್ ಇಲ್ಲಿವರೆಗೆ ಆದಂತಹ ವರದಿ ಸಲ್ಲಿಸಲು ಲೋಕಾಯುಕ್ತಕ್ಕೆ ಆದೇಶಿಸಿತ್ತು. ಅದರಂತೆ ಲೋಕಾಯುಕ್ತ ಅಧಿಕಾರಿಗಳಾದ ಮೈಸೂರು ಎಸ್ಪಿ ಉದೇಶ ಹಾಗೂ ಸಿಬ್ಬಂದಿಗಳು ಆಗಮಿಸಿ ತನಿಖಾ ವರದಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಮುಖ ದ್ವಾರದಲ್ಲಿ ಹೈ ಸೆಕ್ಯೂರಿಟಿ ಒದಗಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಿದ್ದರಾಮಯ್ಯ, ಪ್ರಭಾವಿ ರಾಜಕಾರಣಿಗಳು ಜೈಲಿಗೆ ಹೋಗುವುದು ಖಚಿತ: ಅರ್ಜಿದಾರ ಸ್ನೇಹ ಮಯಿ ಕೃಷ್ಣ ಮಾತನಾಡಿ, “ಸಿಎಂ ಸಿದ್ದರಾಮಯ್ಯ ಸೇರಿ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳಿಗೆ ಶಿಕ್ಷೆ ಖಚಿತ. ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದೆ. ನಾನು ಕೇವಲ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿಲ್ಲ. ಸಿದ್ದರಾಮಯ್ಯ ಉದಾಹರಣೆ ಇಟ್ಕೊಂಡು ಎಲ್ಲವೂ ತನಿಖೆ ಆಗಬೇಕು. ತನಿಖೆ ಆದರೆ ಸಿದ್ದರಾಮಯ್ಯ, ಪ್ರಭಾವಿ ರಾಜಕಾರಣಿಗಳು ಜೈಲಿಗೆ ಹೋಗುವುದು ಖಚಿತ. ಇವತ್ತು ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಶೇಕಡಾ 99 ರಷ್ಟು ಆದೇಶ ಹೊರಬರಬಹುದು” ಎಂಬ ವಿಶ್ವಾಸ ವ್ಯಕ್ತಪಡಿಸಿದರು.














