ಬಿಜೆಪಿ ಎಂಎಲ್ಸಿ ಯೋಗೀಶ್ ತಿಲೇಕರ್ ಸಂಬಂಧಿ ಸತೀಶ್ ವಾಘ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದರ ಹಿಂದೆ ಪತ್ನಿಯದ್ದೇ ಕೈವಾಡವಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸತೀಶ್ ವಾಘ್ ಹತ್ಯೆಗೆ ಸಂಬಂಧಿಸಿದಂತೆ ಪುಣೆ ಪೊಲೀಸ್ ಕ್ರೈಂ ಬ್ರ್ಯಾಂಚ್ ಮತ್ತೊಬ್ಬ ಶಂಕಿತನನ್ನು ಬಂಧಿಸಿದೆ. ತನಿಖೆಯಲ್ಲಿ ಆಘಾತಕಾರಿ ಅಂಶ ಬಹಿರಂಗಗೊಂಡಿದ್ದು, ಈ ಕೊಲೆ ಹಿಂದಿನ ಮಾಸ್ಟರ್ಮೈಂಡ್ ಸತೀಶ್ ಅವರ ಪತ್ನಿಯೇ ಎಂಬುದು ತಿಳಿದುಬಂದಿದೆ.
ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಪ್ರಕಾರ, ಮೊದಲ ಆರೋಪಿ ಅತಿಶ್ ಜಾಧವ್, ವಾಘ್ ಪತ್ನಿ ಕೊಲೆಗೆ ಸುಪಾರಿಯಾಗಿ 5 ಲಕ್ಷ ರೂ. ನೀಡಿದ್ದರು ಎಂದು ಹೇಳಿದ್ದು, ಬುಧವಾರ ಆಕೆಯನ್ನು ಬಂಧಿಸಲಾಗಿದೆ.
ಕೊಲೆ ಮಾಡಲು ವಾಘ್ ಪತ್ನಿಯಿಂದ 5 ಲಕ್ಷ ರೂಪಾಯಿ ಪಡೆದಿದ್ದನ್ನು ಜಾಧವ್ ಒಪ್ಪಿಕೊಂಡಿದ್ದಾನೆ. ಅಪಹರಣ ಮತ್ತು ಹತ್ಯೆಯ ಹಿಂದೆ ಆಕೆಯ ಪಾತ್ರವನ್ನು ತನಿಖೆಯಿಂದ ಸಾಬೀತುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಡಿಸೆಂಬರ್ 9 ರಂದು ಬೆಳಗ್ಗೆ 5.30 ರ ಸುಮಾರಿಗೆ ಪುಣೆಯ ಯವತ್ ಪ್ರದೇಶದಲ್ಲಿ ಬೆಳಗಿನ ವಾಕ್ ಮಾಡುವಾಗ ವಾಘ್ ಅವರನ್ನು ಅಪಹರಿಸಲಾಗಿತ್ತು.
ಘಟನೆಯನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿಯಲಾಗಿದ್ದು, 48 ಗಂಟೆಗಳಲ್ಲಿ ಮೊದಲ ಶಂಕಿತನನ್ನು ಪೊಲೀಸರು ಬಂಧಿಸಲು ಕಾರಣರಾದರು. ವಾಘ್ ಅವರ ದೇಹವು ಪುಣೆ ಬಳಿಯ ಶಿಂಧೇವನೆ ಘಾಟ್ ನಲ್ಲಿ ಸುಮಾರು 70 ಬಾರಿ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಧುಲೆಯಿಂದ ಪವನ್ ಶರ್ಮಾ, ಫರ್ಸುಂಗಿಯಿಂದ ನವನಾಥ್ ಗುರಾಲ್ ಮತ್ತು ಧಾರಾಶಿವ್ನಲ್ಲಿ ಬಂಧಿತರಾದ ಜಾಧವ್ ಸೇರಿದಂತೆ ನಾಲ್ವರು ಶಂಕಿತರಲ್ಲಿ ಮೂವರನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.














