ಮನೆ ಅಪರಾಧ ಮೈಸೂರು: ಹುಲಿ ದಾಳಿಗೆ ವ್ಯಕ್ತಿ ಬಲಿ

ಮೈಸೂರು: ಹುಲಿ ದಾಳಿಗೆ ವ್ಯಕ್ತಿ ಬಲಿ

0

ಮೈಸೂರು(Mysuru): ಹೊಲಕ್ಕೆ ತೆರಳಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಅರಣ್ಯ ಪ್ರದೇಶ ವ್ಯಾಪ್ತಿಗೆ ಸೇರಿದ ಒಡೆಯನಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಪುಟ್ಟಸ್ವಾಮಿಗೌಡ (46) ಹುಲಿ ದಾಳಿಯಲ್ಲಿ ಮೃತಪಟ್ಟ ದುರ್ದೈವಿ.

ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಹಾದನೂರು ಒಡೆಯನಪುರ ಗ್ರಾಮದ ಹೊರವಲಯದ ನಂಜೇದೇವರಬೆಟ್ಟದ ಸಮೀಪ ಜಮೀನಿನಲ್ಲಿ ದನಗಳನ್ನು ಮೇಯಲು ಬಿಟ್ಟಿದ್ದರು.

ಈ ವೇಳೆ ಪುಟ್ಟಸ್ವಾಮಿಗೌಡ ಅವರ ಮೇಲೆ ಹುಲಿ ದಾಳಿ ನಡೆಸಿ ಕತ್ತು ಸೀಳಿ ರಕ್ತ ಹೀರಿದೆ. ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ಹಸುವಿನ ಮೇಲೂ ದಾಳಿ ನಡೆಸಿ ಕೊಂದು ಹಾಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಹುಲಿಯ ಹೆಜ್ಜೆಗಳ ಗುರುತು ಮೂಡಿರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಎಸಿಎಫ್ ಪರಮೇಶ್, ಹೆಡಿಯಾಲ ಅರಣ್ಯ ವಲಯದ ಆರ್‌ಎಫ್ಒ ಮಂಜುನಾಥ್ ಭೇಟಿ ನೀಡಿದ್ದರು. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು, ಶೀಘ್ರವೇ ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಹಿಂದಿನ ಲೇಖನಮೈಸೂರು: ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ವಿವಿಧ ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನವಾಣಿಜ್ಯ ಬಳಕೆಯ ಎಲ್‍’ಪಿಜಿ ಸಿಲಿಂಡರ್ ದರ ಇಳಿಕೆ