ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಹುದ್ದೆಯ ಶೀತಲ ಸಮರ ತೀವ್ರಗೊಂಡಿದ್ದು, ಈ ನಡುವೆ ಹರಿದ್ವಾರದಿಂದ ಬಂದ ನಾಗ ಸಾಧುಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ಆಶೀರ್ವಾದ ಪಡೆದಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಕಾಶಿಯಿಂದ ಬಂದ ನಾಗ ಸಾಧುಗಳು ಡಿಕೆಶಿ ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದರು. ಇಂದು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಬಂದ 20ಕ್ಕೂ ಹೆಚ್ಚು ನಾಗ ಸಾಧುಗಳು ಡಿಕೆಶಿಗೆ ಆಶೀರ್ವಾದ ಮಾಡಿದ್ದಾರೆ.
ಆಶೀರ್ವಾದ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅವರು ಮನೆಯ ಬಾಗಿಲಿಗೆ ಬಂದಿದ್ರು. ಬಂದಾಗ ಅವರನ್ನ ಹೋಗಿ ಎನ್ನಲು ಆಗೋದಿಲ್ಲ, ಅವರು ಬಂದು ಆಶೀರ್ವಾದ ಮಾಡಿದ್ರು. ಯಾರಾದ್ರೂ ನಿಮ್ಮ ಮನೆಗೆ ಬಂದ್ರೆ ನೀವೂ ಹಾಗೇ ಕಳಿಸ್ತೀರಾ? ಹಾಗೆ ಧಾರ್ಮಿಕತೆಯಲ್ಲಿ ಬಂದಿದ್ರು, ಬಂದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡೆ ಎಂದರು.
ನಾಗ ಸಾಧುಗಳ ಲೋಕವೇ ಚಿತ್ರ ವಿಚಿತ್ರ. ಅವರು ನಮಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವರನ್ನು ನಾವು ಧಾರ್ಮಿಕ ಯಾತ್ರೆಗಳಾದ ಮಾಹಾಕುಂಭಮೇಳ, ಕುಂಭಮೇಳದಂತಹ ಸಮಯದಲ್ಲಿ ಮಾತ್ರ ಕಾಣಬಹುದು. ಅವರಲ್ಲೂ ಅಪಾರ ದೈವಿಕ ಶಕ್ತಿಯಿರುತ್ತದೆ ಎಂಬುದು ನಂಬಿಕೆ. ಅವರ ಕಟ್ಟುನಿಟ್ಟಿನ ದೈನಂದಿನ ನಿಯಮಗಳು ಮತ್ತು ಕಠಿಣವಾದ ಜೀವನ ಶೈಲಿ ಎಂತಹ ವ್ಯಕ್ತಿಯನ್ನಾದರೂ ಒಮ್ಮೆ ದಂಗಾಗಿಸುತ್ತದೆ.

ದೂರದಿಂದ ಅಥವಾ ಹೊರಗಡೆಯಿಂದ ನೋಡುವಾಗ ಅವರು ಅಸ್ಠವ್ಯಸ್ಥವಾದ ಕೂದಲನ್ನು ಹೊಂದಿರುವಂತೆ, ಶಿಸ್ತನ್ನು ಮರೆತಂತೆ ಕಂಡರೂ ಅವರು ಮಾಡುವ ಪ್ರತಿಯೊಂದು ಕೆಲಸವೂ ವ್ಯವಸ್ಥಿತವಾಗಿ ಮಾಡುತ್ತಾರೆ. ಅವರು ನಾಗ ಸಾಧುಗಳು ಎನಿಸಿಕೊಳ್ಳಬೇಕಾದರೆ ಕಠಿಣವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾಗಾ ಸಾಧುಗಳಿಗೆ ದೀಕ್ಷೆ ನೀಡಿದ ನಂತರ ಅವರನ್ನು ವಿಶೇಷ ವರ್ಗದಲ್ಲಿ ಇರಿಸಲಾಗುತ್ತದೆ.
ದೆಹಲಿ ಪ್ರವಾಸದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ದೆಹಲಿಗೆ ಹೋಗ್ತಿನಿ, ಜಲಮಂಡಲಿಯಿಂದ ಒಂದು ಕೆಲಸ ಇದೆ, ಅದನ್ನು ಮುಗಿಸಬೇಕು. ಜೊತೆಗೆ ಮೇಕೆದಾಟು ವಿಚಾರ ಚರ್ಚೆ ಮಾಡಲಾಗುತ್ತೆ, ಇಲಾಖೆಯ ಕೆಲಸದ ಬಗ್ಗೆ ಚರ್ಚೆ ಆಗಬೇಕಿದೆ. ಹಾಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಎಂದು ವಿವರಿಸಿದರು. ಇನ್ನೂ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ವಿಚಾರ ಕುರಿತು ಮಾತನಾಡಿ, ನಿಮಗೆ ಹೇಳ್ಬಿಟ್ಟೇ ಹೋಗ್ತೀನಿ, ನಿಮಗೆ ಹೇಳದೆ ನಾನು ಹೋಗೋದಿಲ್ಲ ಎಂದು ಹೇಳಿದರು.
ಈ ಬೆನ್ನಲ್ಲೇ ನರೇಗಾ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಬೇಕಾದ್ರೆ ನೋಟ್ನಲ್ಲಿರುವ ಫೋಟೋ ತೆಗೆಯಲಿ. ಆದ್ರೆ ಇಂದು ಮಾಡಿರುವುದು ದೊಡ್ಡ ಅನ್ಯಾಯ. ಗಾಂಧಿ ಮಹಾತ್ಮರು ಅವರ ಹೆಸರು ತೆಗೆಯೋದು ಸರಿಯಲ್ಲಾ. ಇದು ಕೇಂದ್ರ ಸರ್ಕಾರ ಮಾಡಿದ ದೊಡ್ಡ ತಪ್ಪು. ಇದಕ್ಕೆ ಜನ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.















