ಮನೆ ರಾಜಕೀಯ ಸಿದ್ದರಾಮಯ್ಯ ಪ್ರಕರಣದಲ್ಲಿ ನಿರ್ಲಕ್ಷ್ಯ: ಲೋಕಾಯುಕ್ತ ಎಡಿಜಿಪಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ

ಸಿದ್ದರಾಮಯ್ಯ ಪ್ರಕರಣದಲ್ಲಿ ನಿರ್ಲಕ್ಷ್ಯ: ಲೋಕಾಯುಕ್ತ ಎಡಿಜಿಪಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ

0

ಬೆಂಗಳೂರು: ಸಿದ್ಧರಾಮಯ್ಯ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಎಡಿಜಿಪಿ ಅವರನ್ನು ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮತ್ತು ಶೋಕಾಸ್ ನೋಟಿಸ್ (Showc  Cause Notice) ನೀಡಿ, ಕೂಡಲೇ ಖುದ್ದು ಹಾಜಾರಾಗಬೇಕೆಂದು ಆದೇಶ ಹೊರಡಿಸಿದ್ದಾರೆ.

Join Our Whatsapp Group

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಹಿಂದೆ 2013-2018 ರ ಅವಧಿಯಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಅತ್ಯಂತ ಆಪ್ತ ಸ್ನೇಹಿತ ಎಲ್. ವಿವೇಕಾನಂದ (ಕಿಂಗ್ಸ್ ಕೋರ್ಟ್ ವಿವೇಕ್) ಅವರಿಂದ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ (1,30,000) ಗಳನ್ನು ಚೆಕ್ ರೂಪದಲ್ಲಿ ಪಡೆದು ಬೆಂಗಳೂರು ಟರ್ಫ್ ಕ್ಲಬ್ ನ ಉಸ್ತುವಾರಿ ಹುದ್ದೆಗೆ ನಿಯೋಜಿಸುವ ಮೂಲಕ ಪ್ರಜಾ ಪ್ರತಿನಿಧಿಗಳ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದರು.

ಈ ಸಂಬಂಧ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷರಾದ ಎನ್ ಆರ್. ರಮೇಶ್ ರವರು ದಿನಾಂಕ 02/11/2022 ರಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರಲ್ಲದೇ, ಜನಪ್ರತಿನಿಧಿಗಳ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರನ್ನೂ (PCR ಸಂಖ್ಯೆ: 53/2022) ಸಹ ದಾಖಲಿಸಿದ್ದರು.

ಸದರಿ ಪ್ರಕರಣದ ತನಿಖೆಯನ್ನು ಏಕ ಪಕ್ಷೀಯವಾಗಿ ನಡೆಸಿದ್ದ ಲೋಕಾಯುಕ್ತರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ಧರಾಮಯ್ಯನವರ ಪ್ರಭಾವಕ್ಕೆ ಒಳಗಾಗಿ ಬಿ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಎನ್ ಆರ್  ರಮೇಶ್ ರವರ ವಕೀಲರು ದಾಖಲೆಗಳ ಸಹಿತ ಮಂಡಿಸಿದ್ದ ವಾದವನ್ನು ಆಲಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಸದರಿ ಪ್ರಕರಣದ ತನಿಖೆಯನ್ನು “ಮೊದಲಿನಿಂದ ಹೊಸದಾಗಿ ಪ್ರಾರಂಭಿಸಿ  ಆರು ತಿಂಗಳ ಒಳಗಾಗಿ ಸಮರ್ಪಕ  ಹೊಸ ತನಿಖಾ ವರದಿಯನ್ನು  ನ್ಯಾಯಾಲಯಕ್ಕೆ ಸಲ್ಲಿಸುವಂತೆ” ದಿನಾಂಕ 21/02/2024 ರಂದು ಆದೇಶಿಸಿದ್ದರು.

ನ್ಯಾಯಾಧೀಶರು ವಿಧಿಸಿದ್ದ ಆರು ತಿಂಗಳ ಗಡುವು ಮೀರಿದ್ದರಿಂದ ದಿನಾಂಕ 22/08/2024 ರಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ. ಸಂತೋಷ್ ಗಜಾನನ ಭಟ್ ಅವರು ನ್ಯಾಯಾಲಯಕ್ಕೆ ಲೋಕಾಯುಕ್ತದ ADGP (ಅಪರ ಪೋಲೀಸ್ ಮಹಾ ನಿರ್ದೇಶಕ, ಲೋಕಾಯುಕ್ತ) ರವರು ಖುದ್ದು ಹಾಜರಿ ಇಲ್ಲದೇ ಇರುವುದನ್ನು ಮತ್ತು ಆರು ತಿಂಗಳ ಗಡುವು ಮುಗಿದರೂ ಹೊಸ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದರಿಂದ ಲೋಕಾಯುಕ್ತದ ಪರವಾದ ವಕೀಲರನ್ನು ನ್ಯಾಯಾಲಯದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

ಲೋಕಾಯುಕ್ತದ ವಕೀಲರು ನ್ಯಾಯಾಲಯವು ಮರು ತನಿಖೆಗೆ ಆದೇಶಿಸಿರುವ ವಿಷಯ ಲೋಕಾಯುಕ್ತದ ADGP ಅವರಿಗೆ ತಿಳಿದಿಲ್ಲದೇ ಇರುವುದರಿಂದ ಹೊಸದಾದ ತನಿಖೆ ಇನ್ನೂ ಪ್ರಾರಂಭವಾಗಿಲ್ಲ ಎಂಬ ಮಾತನ್ನು ಹೇಳುತ್ತಿದ್ದಂತೆ ಕೆಂಡಾಮಂಡಲರಾದ ನ್ಯಾಯಾಧೀಶರು “ಈ ಪ್ರಕರಣದ ಮರು ತನಿಖೆಗೆ ನ್ಯಾಯಾಲಯವು ಆದೇಶಿಸಿ ಆರು ತಿಂಗಳು ಈಗಾಗಲೇ ಮುಗಿದಿದ್ದು, ಎಲ್ಲಾ ಮಾಧ್ಯಮಗಳಲ್ಲಿ ಈ ಸಂಬಂಧ ವರದಿಗಳು ಪ್ರಸಾರವಾಗಿರುತ್ತದೆ ಮತ್ತು ನ್ಯಾಯಾಲಯದಿಂದ ಲೋಕಾಯುಕ್ತ ಪೋಲೀಸರಿಗೆ ಅಧಿಕೃತ ಮಾಹಿತಿ ತಲುಪಿರುತ್ತದೆ”. ಹೀಗಿರುವಲ್ಲಿ – “ನ್ಯಾಯಾಧೀಶರೇ ಖುದ್ದಾಗಿ ಲೋಕಾಯುಕ್ತ ಕಛೇರಿಗೆ ಬಂದು ADGP ಅವರಿಗೆ ಮರು ತನಿಖೆ ಮಾಡುವ ಬಗ್ಗೆ ಆದೇಶ ನೀಡಿರುವುದಾಗಿ ತಿಳಿಸಬೇಕೇ ?” ಎಂದು ಖಾರವಾಗಿ ಲೋಕಾಯುಕ್ತ ವಕೀಲರನ್ನು ಪ್ರಶ್ನಿಸಿದರು.ನಂತರ ಮುಂದುವರೆದು, ತಕ್ಷಣವೇ ಲೋಕಾಯುಕ್ತದ ಎಡಿಜಿಪಿ ಅವರಿಗೆ ಈ ಸಂಬಂಧ ಶೋಕಾಸ್ (ಕಾರಣ ಕೇಳಿ ನೋಟೀಸ್) ಅನ್ನು ಜಾರಿ ಮಾಡಿದ್ದಲ್ಲದೇ, ಈ ಕೂಡಲೇ ಲೋಕಾಯುಕ್ತದ ಎಡಿಜಿಪಿ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶವನ್ನು ನೀಡಿದರು.

ಸದರಿ ಪ್ರಕರಣದ ತನಿಖಾಧಿಕಾರಿ ತಿಪ್ಪೇಸ್ವಾಮಿ ನ್ಯಾಯಾಲಯದಲ್ಲಿ ಹಾಜರಾಗಿ, ಎರಡು ದಿನಗಳ ಹಿಂದಷ್ಟೇ ಹೊಸ ಎಡಿಜಿಪಿ ಅವರು ಲೋಕಾಯುಕ್ತಕ್ಕೆ ನಿಯೋಜನೆ ಆಗಿರುವ ಬಗ್ಗೆ ತಿಳಿಸಿದರು.

ತನಿಖಾಧಿಕಾರಿ ಮತ್ತು ಲೋಕಾಯುಕ್ತ ಎಸ್ ಪಿ ಅವರಿಗೆ ಶೋಕಾಸ್ ಅನ್ನು ಜಾರಿ ಮಾಡಿದ ನ್ಯಾಯಾಧೀಶರು ಸೆಪ್ಟಂಬರ್ 12 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಆದೇಶಿಸಿದರು.