ಈ ಪ್ರಕಾರವಾಗಿ, ಹೊಸದಾಗಿ ಮನೆ ಕಟ್ಟಿಸುವಾಗ,ಪ್ರಥಮದಲ್ಲಿ ವಾಸ್ತು ಪುರುಷನ ಸಂತೃಪ್ತಿ ಗೋಸ್ಕರ ಆತನನ್ನು ಸ್ತುತಿಸಿ, ಷೋಡಶೋಪಚಾರಿಗಳಿಂದ ಪೂಜೆ ಮಾಡಬೇಕು. ವಾಸ್ತು ಪುರುಷನಿಗೆ ಶಾಂತಿಯನ್ನು ಮಾಡಿಸದೇ ಮನೆಯನ್ನು ಕಟ್ಟಲಿಕ್ಕೆ ಪ್ರಾರಂಭ ಮಾಡಕೂಡದೆಂಬುದು ಮುಂದೆ ಬರೆದಿರುವ ಆತನ ಮಹಾನ್ ಚರಿತ್ರದಿಂದ ಕಂಡುಬರುತ್ತದೆ.
ವಾಸ್ತುದೇವನ ಚರಿತ್ರೆಯು :
ಪೂರ್ವದಲ್ಲಿ ಕೃತ ಯುಗದ ಆರಂಭದಲ್ಲಿ ವಿರಾಟ್ ಪುರುಷನ ಸಂಕಲ್ಪದಿಂದ ಮಹಾ ಭಯಂಕರ ಸ್ವರೂಪವುಳ್ಳ ಒಂದು ಭೂತವೂ ಉನ್ನತವಾಗಿ ಅದು ಇಂದ್ರಾದಿ ದೇವತೆಗಳಿಗೂ ಕೂಡ ಉಪಟಳವನ್ನು ಕೊಡಲಿಕ್ಕೆ ಹತ್ತಿತು. ಆ ಮಹಾಭೂತವನ್ನು ನೋಡಿ ಭಯಭ್ರಾಂತದರಾದ ಎಲ್ಲ ದೇವತೆಗಳೂ ಕೂಡಿ ಬ್ರಹ್ಮದೇವನಲ್ಲಿಗೆ ದೇವ ಆ ಅದ್ಭುತ ಭಯಂಕರವಾದ ಭೂತವನ್ನು ನೋಡಿ ನಮ್ಮೆಲ್ಲರಿಗೂ ಭಯವಾಗುತ್ತಲಿದೆ.ಅದರ ಭಯಂಕರವಾದ ಆಕಾರವನ್ನು ನೋಡಿದ ನಮಗೆ ಅದು ಯಾವ ಹೊತ್ತಿನಲ್ಲಿ ಏನು ಮಾಡುವುದೋ ಹೇಳಲಿಕ್ಕೆ ಬರುವಂತಿಲ್ಲ. ಆದ್ದರಿಂದ ಭಯ ನಿವಾರಕನಾದ ನೀನು ನಮ್ಮನ್ನು ಕಾಪಾಡಬೇಕು.ಎಂದು ಬ್ರಹ್ಮದೇವನಿಗೆ ಮೊರೆ ಹೊಕ್ಕರು. ಬ್ರಹ್ಮನು ಸ್ವಾತ್ಮಜ್ಞಾನದಿಂದ ಮಹೇಶನನ್ನು ಪ್ರಾರ್ಥಿಸಿ ಆ ಭಯಂಕರವಾದ ಭೂತದ ಸೃಷ್ಟಿ ಕ್ರಮವನ್ನು ಅರಿತನಾಗಿ ದೇವತೆಗಳಿಗೆ ಇಂತೆಂದನು “ದೇವತೆಗಳಿರಾ! ಈ ಮಹಾ ಭೂತಕ್ಕೆ ನೀವಾರು ಭಯ ಪಡುವುದಕ್ಕೆ ಕಾರಣವೇ ಇಲ್ಲ.ಅದು ನೋಡಲಿಕ್ಕೆ ಮಾತ್ರ ಭಯಂಕರವಾಗಿದೆ.
ಈಗ ನೀವೆಲ್ಲರೂ ಕೂಡಿ ಆ ಭೂತವಿದ್ದಲ್ಲಿಗೆ ಧೈರ್ಯದಿಂದ ಹೋಗಿ ಆ ಭೂತವೂ ನಿದ್ರಿಸುತ್ತಿರುವ ವೇಳೆಯನ್ನು ಸಾಧಿಸಿ,ಆಗ ಆ ಭಯಂಕರ ಮೂರ್ತಿಯ ಮುಖವು ನಿಮ್ಮ ದೃಷ್ಟಿಗೆ ಬೀಳದೆ ಇರುವುದರಿಂದ ನಿಮಗೆ ತಿಲಮಾತ್ರವೂ ಭಯವಾಗಲಾರದು ಎಂದು ಧೈರ್ಯ ಹೇಳಲು, ದೇವತೆಗಳೆಲ್ಲರೂ ಬ್ರಹ್ಮದೇವನ ಹೇಳಿಕೆಯಂತೆ ಧೈರ್ಯದಿಂದ ಆ ಅದ್ಬುತಾಕಾರವಾದ ಭೂತವು ಮಲಗಿರುವ ಸ್ಥಳಕ್ಕೆ ಜಾಗೃತೆಯಿಂದ ಹೋಗಿ ಮೇಲ್ಮುಖ ಮಾಡಿ ಮಲಗಿದ್ದ ಭೂತವನ್ನು ಉರುಳಿಸಿ ಅದನ್ನು ಅಧೋಮುಖವನ್ನಾಗಿ ಮಾಡಿ ಮಲಗಿಸಿ, ಅದರ ಮೇಲೆ ತಮ್ಮೆಲ್ಲ ಭಾರವನ್ನು ಹೇರಿ ಕುಳಿತುಬಿಟ್ಟರು. ದೇವತೆಗಳ ಭಾರ ಕಡಿಮೆ?ದೇವತೆಗಳ ಭಾರವನ್ನು ತಾಳಲಾರದೇ ಅದು ಸಂಕಟದಿಂದ ದೊಡ್ಡ ಧ್ವನಿಯಿಂದ ಚೀತ್ಕರಿಸುತ್ತ ಬ್ರಹ್ಮದೇವನನ್ನು ಪ್ರಾರ್ಥಿಸಹತ್ತಿತು. ತನಗೆ ಬಂದಿರುವ ಆಧೋಮುಖ ಗತಿಯನ್ನು ನಿವಾರಿಸಲು ಬೇಡಿಕೊಳ್ಳಲು ಹತ್ತುತು. ಆಗ ಬ್ರಹ್ಮದೇವನು ಪ್ರಸನ್ನ ಚಿತ್ತನಾಗಿ ಆ ಮಹಾಭೂತವನ್ನು ತನ್ನ ವರದ ಹಸ್ತದಿಂದ ಆಶೀರ್ವದಿಸಿ ಆ ಭೂತವನ್ನು ”ವಾಸ್ತು ದೇವ” ಎಂಬ ಪೂಜ್ಯ ನಾಮದಿಂದ ಕರೆದು ಅನುಗ್ರಹಿಸಿದನು .