ಮನೆ ಕಾನೂನು ಕ್ರಿಮಿನಲ್ ಅ‍ಪರಾಧಗಳಿಗೆ ಹೊಸ ಕಾನೂನು: ಇಂದಿನಿಂದ ಜಾರಿ

ಕ್ರಿಮಿನಲ್ ಅ‍ಪರಾಧಗಳಿಗೆ ಹೊಸ ಕಾನೂನು: ಇಂದಿನಿಂದ ಜಾರಿ

0

ನವದೆಹಲಿ: ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಸೋಮವಾರದಿಂದ (ಜುಲೈ 1) ಜಾರಿಗೆ ಬರಲಿವೆ.
ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿರುವ ಕಾಯ್ದೆಗಳು.
163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಗೆ ಬರಲಿವೆ.

ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿ ಯಾಗಿ ಎದುರಿಸುವ ಕಾರ್ಯವಿಧಾನವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೀರೋ ಎಫ್‌ಐಆರ್, ಆನ್‌ಲೈನ್‌ ಮೂಲಕ ದೂರು ಸಲ್ಲಿಕೆಗೆ ಅವಕಾಶ, ಎಸ್‌ಎಂಎಸ್‌ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಹೇಯ ಅಪರಾಧ ನಡೆದಾಗ ಆ ಸ್ಥಳದ ವಿಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸಿರುವಂತಹ ನಿಬಂಧನೆಗಳನ್ನು ಒಳಗೊಂಡಿರುವ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ.

ಜುಲೈ 1ರ ಹಾಗೂ ಆ ಬಳಿಕದ ಎಲ್ಲ ಎಫ್‌ಐಆರ್‌ಗಳನ್ನು ಸಿಆರ್‌ಪಿಸಿಯ 154ನೇ ಸೆಕ್ಷನ್‌ ಬದಲು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 173ನೇ ಸೆಕ್ಷನ್‌ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.

ಹೊಸ ಕಾನೂನು ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದ ಮೂರು ಹೊಸ ಕಾನೂನುಗಳ ಜಾರಿ ಕುರಿತು ವಕೀಲರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಳೆಯ ಮತ್ತು ಹೊಸ ಎರಡೂ ಕಾನೂನುಗಳನ್ನು 20 ವರ್ಷಗಳವರೆಗೆ ಬಳಸಬೇಕಾಗುತ್ತದೆ ಎಂದು ಕೆಲವರು ಹೇಳಿದರೆ, ಹೊಸ ಕಾನೂನುಗಳ ಆಧಾರದಲ್ಲೇ ಎಲ್ಲವೂ ನಡೆಯುತ್ತದೆ ಎಂಬುದು ಇನ್ನೂ ಕೆಲವರ ಅಭಿಪ್ರಾಯ.

ಮೂರು ಕಾನೂನುಗಳ ಕೆಲವು ಅಂಶಗಳು

  • ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳ ಒಳಗಾಗಿ ತೀರ್ಪು ಪ್ರಕಟಿಸಬೇಕು. ಮೊದಲ ವಿಚಾರಣೆ ನಡೆದ 60 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು
  • ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನಗಳ ಒಳಗೆ ಸಲ್ಲಿಕೆಯಾಗಬೇಕು
  • 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕನಿಷ್ಠ 20 ವರ್ಷ ಜೈಲು
  • ಅಪರಾಧಗಳ ಬಗ್ಗೆ ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮ ಬಳಸಿ ದೂರು ನೀಡಬಹುದು. ವ್ಯಕ್ತಿಯು ಪೊಲೀಸ್‌ ಠಾಣೆಗೆ ಖುದ್ದಾಗಿ ಹೋಗುವ ಅಗತ್ಯವಿಲ್ಲ
  • ‘ಜೀರೊ ಎಫ್‌ಐಆರ್‌’ ಪರಿಕಲ್ಪನೆಯಡಿ, ವ್ಯಕ್ತಿಯು ಅಪರಾಧ ಕೃತ್ಯದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬಹುದು. ಠಾಣಾ ವ್ಯಾಪ್ತಿಯ ಪ್ರಶ್ನೆ ಉದ್ಭವಿಸದು
  • ಬಂಧಿತ ವ್ಯಕ್ತಿಯು ತನ್ನ ಸ್ಥಿತಿಯ ಬಗ್ಗೆ ತಾನು ಇಚ್ಛಿಸಿದ ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಬಹುದು. ಬಂಧಿತ ವ್ಯಕ್ತಿಗೆ ತಕ್ಷಣಕ್ಕೆ ನೆರವು ಪಡೆಯಲು ಇದರಿಂದ ಸಾಧ್ಯವಾಗಲಿದೆ
  • ಬಂಧನದ ವಿವರಗಳನ್ನು ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಕಟಿಸಬೇಕು.
  • ಮಹಿಳೆಯರನ್ನು ಗುರಿಯಾಗಿಸಿಕೊಂಡ ಕೆಲವು ಅಪರಾಧಗಳಲ್ಲಿ, ಸಂತ್ರಸ್ತೆಯ ಹೇಳಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಮಹಿಳಾ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ದಾಖಲು ಮಾಡಿಕೊಳ್ಳಬೇಕು
  • ಆರೋಪಿ ಹಾಗೂ ಸಂತ್ರಸ್ತರಿಗೆ ಎಫ್‌ಐಆರ್, ಪೊಲೀಸ್ ವರದಿ, ದೋಷಾರೋಪ ಪಟ್ಟಿ, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳನ್ನು 14 ದಿನಗಳೊಳಗೆ ನೀಡಬೇಕು
  • ಸಮನ್ಸ್‌ಗಳನ್ನು ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮದ ಮೂಲಕ ರವಾನಿಸಬಹುದು
  • ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯಗಳು ಗರಿಷ್ಠ ಎರಡು ಸಲ ಮಾತ್ರ ಮುಂದೂಡಬಹುದು
  • ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳು ಸಾಕ್ಷಿಗಳ ರಕ್ಷಣೆಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು
  • ಗಂಭೀರ ಸ್ವರೂಪದ ಅಪರಾಧ ನಡೆದ ಸಂದರ್ಭ ಗಳಲ್ಲಿ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯ. ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಬೇಕು
  • ತಲೆಮರೆಸಿಕೊಂಡ ಆರೋಪಿಗಳ ವಿಚಾರಣೆ ಮತ್ತು ಅವರ ವಿರುದ್ಧ ತೀರ್ಪು ನೀಡಲು ಅವಕಾಶ
  • ಮಹಿಳೆಯರು, 15 ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ತೀವ್ರ ಅನಾರೋಗ್ಯ ಸಮಸ್ಯೆ ಇರುವವರಿಗೆ ಪೊಲೀಸ್ ಠಾಣೆಗೆ ಹೋಗುವುದರಿಂದ ವಿನಾಯಿತಿ
ಹಿಂದಿನ ಲೇಖನವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ
ಮುಂದಿನ ಲೇಖನಬುಡುಬುಡಿಕೆ ವೇಷ ಧರಿಸಿ 2.4 ಲಕ್ಷ ರೂ. ಬೆಲೆಯ ಚಿನ್ನಾಭರಣ ಪಡೆದು ವಂಚನೆ