ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ನಾಲ್ವರು ಪೂರ್ಣಾವಧಿ ಸದಸ್ಯರು ಹಾಗೂ 15 ಕೇಂದ್ರ ಸಚಿವರನ್ನೊಳಗೊಂಡ ನೀತಿ ಆಯೋಗವನ್ನು ಮಂಗಳವಾರ ಪುನರ್ರಚನೆ ಮಾಡಿದೆ. ಎನ್ಡಿಎ ಮಿತ್ರ ಪಕ್ಷಗಳ ನಾಯಕರಿಗೂ ಅವಕಾಶ ಕಲ್ಪಿಸಲಾಗಿದೆ.
ಪ್ರಧಾನಿ ಮೋದಿ ಅವರು ಅಧ್ಯಕ್ಷರಾಗಿ ಹಾಗೂ ಅರ್ಥಿಕ ತಜ್ಞರಾದ ಸುಮನ್ ಕೆ. ಬೆರಿ ಅವರು ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಪುನರ್ರಚನೆಗೊಂಡ ಆಯೋಗದ ಸದಸ್ಯರ ಪಟ್ಟಿಯನ್ನು ಪ್ರಧಾನಿ ಅವರು ಅನುಮೋದಿಸಿದ್ದಾರೆ ಎಂದೂ ತಿಳಿಸಲಾಗಿದೆ.
ವಿಜ್ಞಾನಿ ವಿ.ಕೆ. ಸಾರಸ್ವತ್, ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಾಂದ್, ಶಿಶು ಆರೋಗ್ಯತಜ್ಞ ವಿ.ಕೆ.ಪೌಲ್ ಹಾಗೂ ಅರ್ಥಶಾಸ್ತ್ರಜ್ಞ ಅರವಿಂದ್ ವಿರ್ಮಾನಿ ಅವರು ಪೂರ್ಣಾವಧಿ ಸದಸ್ಯರಾಗಿದ್ದಾರೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ (ರಕ್ಷಣೆ), ಅಮಿತ್ ಶಾ (ಗೃಹ), ಶಿವರಾಜ್ ಸಿಂಗ್ ಚೌಹಾಣ್ (ಕೃಷಿ) ಮತ್ತು ನಿರ್ಮಲಾ ಸೀತಾರಾಮನ್ (ಹಣಕಾಸು) ಪದನಿಮಿತ್ತ ಸದಸ್ಯರು.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಜೆ.ಪಿ.ನಡ್ಡಾ, ಎಚ್.ಡಿ. ಕುಮಾರಸ್ವಾಮಿ, ಜೀತನ್ ರಾಮ್ ಮಾಂಝಿ, ಲಲನ್ ಸಿಂಗ್ ಅವರು ವಿಶೇಷ ಆಹ್ವಾನಿತರಾಗಿದ್ದಾರೆ. ಉಳಿದಂತೆ ಸಚಿವರಾದ ವೀರೇಂದ್ರ ಕುಮಾರ್, ಕೆ.ರಾಮ್ಮೋಹನ್ ನಾಯ್ಡು, ಜೌಲ್ ಓರಮ್, ಅನ್ನಪೂರ್ಣಾ ದೇವಿ, ಚಿರಾಗ್ ಪಾಸ್ವಾನ್ ಹಾಗೂ ರಾವ್ ಇಂದ್ರಜಿತ್ ಸೀಂಗ್ ಅವರು ಇತರ ವಿಶೇಷ ಆಹ್ವಾನಿತರಾಗಿದ್ದಾರೆ.
ಈ ಪೈಕಿ ಕುಮಾರಸ್ವಾಮಿ ಜೆಡಿಎಸ್, ಮಾಂಝಿ ಹಿಂದೂಸ್ತಾನಿ ಅವಂ ಮೋರ್ಚಾ, ರಂಜನ್ ಸಿಂಗ್ ಜೆಡಿಯು, ಪಾಸ್ವಾನ್ ಅವರು ಲೋಕ ಜನಶಕ್ತಿ ಪಕ್ಷ – ರಾಮ್ವಿಲಾಸ್ (ಎಲ್ಜೆಪಿ) ಮತ್ತು ನಾಯ್ಡು ಟಿಡಿಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಕೇಂದ್ರ ಸರ್ಕಾರವು ಈ ಹಿಂದೆ ಇದ್ದ ಯೋಜನಾ ಆಯೋಗವನ್ನು ರದ್ದು ಮಾಡಿ, ನೀತಿ ಆಯೋಗವನ್ನು 2015ರಲ್ಲಿ ರಚನೆ ಮಾಡಿತ್ತು.