ಬೆಂಗಳೂರು (Bengaluru)- ತಮ್ಮ ಜನ್ಮದಿನ ಆಚರಿಸಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K.Shivakumar) ಅವರು ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ತಮ್ಮ ಜನ್ಮದಿನವನ್ನು ಆಚರಿಸಬಾರದು. ಫ್ಲೆಕ್ಸ್, ಕಟೌಟ್, ಭಿತ್ತಿಚಿತ್ರ, ಪೋಸ್ಟರ್ ಯಾವುದನ್ನೂ ಹಾಕಬಾರದು ಎಂದು ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಈ ತಿಂಗಳು 12 ರಿಂದ 18 ರವರೆಗೆ ತಾವು ಊರಿನಲ್ಲಿ ಇರುವುದಿಲ್ಲ. ರಾಜಸ್ಥಾನದ ಉದಯಪುರದಲ್ಲಿ ನಡೆಯುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳಲಿದ್ದೇನೆ. ಹೀಗಾಗಿ ಜನ್ಮದಿನವಾದ ಮೇ 15 ರಂದು ಯಾರಿಗೂ ಸಿಗುವುದಿಲ್ಲ. ಆ ದಿನ ಯಾರೂ ಕೂಡ ಶುಭಾಶಯ ಹೇಳಲು, ಅಭಿನಂದಿಸಲು ಮನೆ ಬಳಿ ಬರಬಾರದು ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ಜನ್ಮದಿನ ನಿಮಿತ್ತ ಯಾರೂ ಕೂಡ ಮಾಧ್ಯಮಗಳಲ್ಲಿ ಶುಭಾಶಯಗಳ ಜಾಹೀರಾತು ನೀಡಬಾರದು. ಒಂದೊಮ್ಮೆ ಕೊಡಲೇಬೇಕು ಎಂದೆನಿಸಿದರೆ ಮುಂದೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಳ್ಳುವ ಹೋರಾಟ, ಪ್ರತಿಭಟನೆಗಳ ಬಗ್ಗೆ ಜಾಹೀರಾತು ನೀಡಬೇಕೆಂದು ವಿನಂತಿಸುತ್ತೇನೆ. ಅದನ್ನೇ ನೀವು ನನಗೆ ಸಲ್ಲಿಸುವ ಜನ್ಮದಿನದ ಶುಭಾಶಯ ಎಂದು ಪರಿಗಣಿಸುತ್ತೇನೆ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.














