ಬೆಂಗಳೂರು: ನ್ಯಾಯಬೆಲೆ ವಿತರಕರ ಸಂಘವು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ನವೆಂಬರ್ 7 ರವರೆಗೆ ಪಡಿತರ ವಿತರಣೆ ಮಾಡದಿರಲು ನಿರ್ಧರಿಸಿದೆ.
ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ನವೆಂಬರ್ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನ್ಯಾಯಬೆಲೆ ಅಂಗಡಿಕಾರರು ನಿರ್ಧರಿಸಿದ್ದಾರೆ.
ಬೇಡಿಕೆಗಳು ಏನು?
ಇ-ಕೆವೈಸಿ ಕೆಲಸ ನಿರ್ವಹಿಸಲು ಸರ್ಕಾರವು 23.75 ಕೋಟಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.
ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹೇಗೆ ನೀಡುತ್ತಿವೆಯೋ ಹಾಗೆಯೇ ಕರ್ನಾಟಕದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಕಮಿಷನ್ ಹಣವನ್ನು ನೀಡಬೇಕು.
ಪ್ರತಿ ಕ್ವಿಂಟಾಲ್ ಅಕ್ಕಿ ವಿತರಿಸಲು 250 ರೂಪಾಯಿ ಕಮಿಷನ್ ನೀಡಬೇಕು
ಅಂಗಡಿ ನಿರ್ವಾಹಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು.
ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು.
5 ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮಾಡುವ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಬೇಕು.
DBT ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು.
ಅಕ್ಕಿ ಬದಲು ಫಲಾನುಭವಿಗಳಿಗೆ ಹಣ ನೀಡುವುದನ್ನು ವಿರೋಧಿಸಿ ನ್ಯಾಯಬೆಲೆ ವಿತರಕರ ಸಂಘ ಅಕ್ಟೋಬರ್ ನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ರಾಜ್ಯಾದ್ಯಂತ 20,350 ನ್ಯಾಯಬೆಲೆ ಅಂಗಡಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಇದೀಗ ಮತ್ತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.














