“ಬಸ್ರಿಕಟ್ಟೆ’ ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೊಂದು ಹಾರರ್ ಕಂ ಸಸ್ಪೆನ್ಸ್ ಚಿತ್ರವಾಗಿದ್ದು, ನವ ನಿರ್ದೇಶಕ ವೈಭವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, ಬಸ್ರಿಕಟ್ಟೆ ಜಾಗಕ್ಕೆ ಈ ಚಿತ್ರಕ್ಕೂ ಸಂಬಂಧವಿಲ್ಲ.
“ಈ ಚಿತ್ರದಲ್ಲಿ ಸಿನಿಮ್ಯಾಟಿಕ್ ಫೀಲ್ಗಿಂತ ನ್ಯಾಚುರಲ್ ಆಗಿ ಮೂಡಿ ಬರಲಿ ಎಂಬ ಕಾರಣಕ್ಕೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ. ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಮ್ಮ ಚಿತ್ರದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಸ್ಟ್ರಾಂಗ್ ಆಗಿದೆ’ ಎಂಬುದು ವೈಭವ್ ಅನಿಸಿಕೆ.
ಐಟಿ ಕ್ಷೇತ್ರದ ಮಂದಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾನಾ ವರ್ಗದ ಜನರಿಗೆ ಟ್ರೇಲರ್ ಸಾಕಷ್ಟು ಇಷ್ಟವಾಗಿದ್ದು, ನವೆಂಬರ್ 3 ರಂದು ಸಿನಿಮಾ ತೆರೆ ಕಾಣಲಿದೆ. ಗೀತಾಂಜಲಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಎನ್ ಪೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.ಕನ್ನಡದ ಕಿರಗೂರಿನ ಗಯ್ಯಾಳಿಗಳು, ಕಾಫಿ ತೋಟ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ ನಾಯಕ.
ಮುಂದಿನ ನಿಲ್ದಾಣ ಸಿನಿಮಾ ಖ್ಯಾತಿಯ ಅನನ್ಯ ಕಶ್ಯಪ್ ನಾಯಕಿ. ಉಳಿದಂತೆ ಬಲರಾಜವಾಡಿ, ಕಿರಣ್ ನಾಯ್ಕ್, ಸಿದ್ಲಿಂಗು ಶ್ರೀಧರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ ಹಾಗೂ ಉಮೇಶ್ ಸಂಕಲನ ಬಸ್ರಿಕಟ್ಟೆ ಚಿತ್ರಕ್ಕಿದೆ.