ಮನೆ ರಾಜ್ಯ ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನು ವಿರೋಧಿಸುತ್ತಾರೆ – ಸಿಎಂ

ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನು ವಿರೋಧಿಸುತ್ತಾರೆ – ಸಿಎಂ

0

ಮೈಸೂರು : ಧರ್ಮಾಂಧರು ಮಾತ್ರ ಬಾನು ಮುಷ್ತಾಕ್‌ ಹೆಸರನ್ನು ವಿರೋಧಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಸಿಎಂ, ದಸರಾ ಉದ್ಘಾಟಕರಾಗಿ ಬಾನು ಮುಷ್ಕಾಕ್‌ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ ನೀಡಿರುವ ಹಳೇ ಹೇಳಿಕೆಗು ಇದಕ್ಕೂ ಏನು ಸಂಬಂಧ? ಬಿಜೆಪಿ ಕುಂಟು ನೆಪ ಹುಡುಕುತ್ತಿದ್ದಾರೆ ಅಷ್ಟೇ. ಯಾವತ್ತೋ ಏನೋ ಹೇಳಿದ್ದಾರೆ ಅಂತ ಅದನ್ನ ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ? ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ ಎಂದರು.

ಬೆರಳಣಿಕೆಯ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ. ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ. ಉದ್ಘಾಟಕರು ದನ ತಿನ್ನುವುದನ್ನ ಬಿಜೆಪಿಯವರು ನೋಡಿದ್ದಾರಾ? ಅವರನ್ನ ವಿರೋಧಿಸಲೇಬೇಕೆಂದು ವಿರೋಧ ಮಾಡ್ತಿದ್ದಾರೆ. ದಸರಾ ಒಂದು ಸಾಂಸ್ಕೃತಿಕ ಹಬ್ಬ. ಇದು ಧರ್ಮಾತೀತವಾದ ಹಬ್ಬವಾಗಿದೆ.

ಇದು ಎಲ್ಲಾ ಜಾತಿ, ಧರ್ಮಕ್ಕೆ ಸೇರಿದ್ದು. ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ. ಟಿಪ್ಪು ಹೈದಾರಲಿ ಕೂಡ ದಸರಾ ನಡೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ. ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲ ಎಂದು ಹೇಳಿದರು.

ಇದೇ ವೇಳೆ ಧರ್ಮಸ್ಥಳ ತನಿಖಾ ವಿಚಾರ ಕುರಿತು ಪ್ರತಿಕ್ರಿಯಿಸಿ, ಉನ್ನತಮಟ್ಟದ ತನಿಖೆ ಅಗತ್ಯತೆ ಇಲ್ಲ. ಧರ್ಮಸ್ಥಳದ ಮೇಲೆ ಅನುಮಾನ ತೂಗುಗತ್ತಿ ಇದೆ. ಅದನ್ನು ನಿವಾರಿಸಲು ತನಿಖೆ ಮಾಡುತ್ತಿದ್ದೇವೆ. ಎಸ್‌ಐಟಿ ತನಿಖೆಯನ್ನ ಧರ್ಮಾಧಿಕಾರಿಗಳೇ ಸ್ವಾಗತ ಮಾಡಿದ್ದಾರೆ. ಬಿಜೆಪಿ ಕೂಡ ಸ್ವಾಗತ ಮಾಡಿತ್ತು. ತನಿಖೆ ನಡೆಯುವ ಈ ಹಂತದಲ್ಲಿ ಧರ್ಮದ ರ‍್ಯಾಲಿ ಮಾಡಿದರೆ ಅದರಲ್ಲಿ ಅರ್ಥ ಇದ್ಯಾ? ಬಿಜೆಪಿ ರಾಜಕೀಯಕ್ಕಾಗಿ ಈ ರ‍್ಯಾಲಿ ಮಾಡುತ್ತಿದೆ. ಬಿಜೆಪಿಯವರು ಡೋಂಗಿಗಳು.

ಡೋಂಗಿಗಳು ಮಾತ್ರ ತಮಗೆ ಬೇಕಾದಾಗ ಬೇಕಾದ ರೀತಿ ಮಾತನಾಡುತ್ತಾರೆ. ನಾವು ಎಸ್‌ಐಟಿ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಯಾವ ಒತ್ತಡವನ್ನ ಸಹ ನಾವು ತನಿಖೆ ಮೇಲೆ ಹೇರಿಲ್ಲ, ತನಿಖೆಗೆ ಸಮಯ ನಿಗದಿ ಮಾಡಿಲ್ಲ. ಯಾರು ಏನು ಬೇಕಾದರೂ ರ‍್ಯಾಲಿ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧ ಇಲ್ಲ. ಬಿಜೆಪಿಯವರಿಗೆ ಧರ್ಮವೂ ಗೊತ್ತಿಲ್ಲ, ಜಾತಿಯೂ ಗೊತ್ತಿಲ್ಲ. ಬರೀ ರಾಜಕಾರಣ ಮಾಡುತ್ತಿದ್ದಾರೆ ಎಂದು ನುಡಿದರು.