ಮನೆ ರಾಜ್ಯ ‘ಆಪರೇಷನ್ ಸಿಂಧೂರ’ ಇಡೀ ದೇಶವೇ ಹೆಮ್ಮೆಪಡುವ ಕಾರ್ಯ : ನಿಖಿಲ್ ಕುಮಾರಸ್ವಾಮಿ

‘ಆಪರೇಷನ್ ಸಿಂಧೂರ’ ಇಡೀ ದೇಶವೇ ಹೆಮ್ಮೆಪಡುವ ಕಾರ್ಯ : ನಿಖಿಲ್ ಕುಮಾರಸ್ವಾಮಿ

0

ರಾಮನಗರ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಇಡೀ ದೇಶಕ್ಕೆ ಸಂತೋಷ ತಂದಿದೆ. ದೇಶದ ಪ್ರಧಾನ ಮಂತ್ರಿಗಳು ಬಹಳ ದಿಟ್ಟ ಹೆಜ್ಜೆ ಇಟ್ಟು ಬಲವಾದ ಧೃಡ ನಿರ್ಧಾರ ತೊಟ್ಟು ಆಪರೇಷನ್ ಸಿಂಧೂರ ಕೈಗೊಂಡಿದ್ದಾರೆ. ಇದನ್ನು ಎಲ್ಲಾ ಭಾರತೀಯರು ಮೆಚ್ಚಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಭಾರತೀಯ ಕುಟುಂಬಗಳು ಅಂದು ಯಾವ ಪರಿಸ್ಥಿತಿ ಎದುರಿಸಿದ್ದರು ಎಂದು ಎಲ್ಲರಿಗೂ ನೋವಿತ್ತು. ಪಹಲ್ಗಾಮ್ ದುರ್ಘಟನೆಯಲ್ಲಿ ಹೆಣ್ಣುಮಕ್ಕಳು ಕುಂಕುಮವನ್ನು ಕಳೆದುಕೊಂಡಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಉಗ್ರರ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ. ಸಿಂಧೂ ನದಿಯ ಬಗ್ಗೆ ಕೂಡ ಪ್ರಧಾನ ಮಂತ್ರಿಗಳು ಚರ್ಚೆ ಮಾಡಿದ್ದಾರೆ. ಭಾರತದ ಮೂಲಕ ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿದು ಹೋಗುತ್ತದೆ. ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿಯುವುದನ್ನು ಕೂಡ ತಪ್ಪಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಇದು ಸ್ವಾಗತಾರ್ಹ ಎಂದು ತಿಳಿಸಿದರು.

ಇನ್ನೂ ಕಾಂಗ್ರೆಸ್ ಪಕ್ಷದಿಂದ ಶಾಂತಿ ಜಪ ಎಂಬ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಪೋಸ್ಟ್‌ನಿಂದಾಗಿ ಕಾಂಗ್ರೆಸ್ ಮನಸ್ಥಿತಿಯನ್ನು ನಾವು ಅಳೆಯಬಹುದು. ಕಾಂಗ್ರೆಸ್ ನವರಿಗೆ ಏನು ಶಾಂತಿ ಬೇಕಂತೆ? ಇನ್ನೆಷ್ಟು ದಿನ ಭಾರತೀಯರು ಶಾಂತಿಯಿಂದ ಇರಬೇಕು. ಪ್ರತಿಯೊಬ್ಬ ಭಾರತೀಯರು ಕೂಡ ಪ್ರಧಾನಿಯ ಕಾರ್ಯವನ್ನು ಮೆಚ್ಚಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲೂ ಆಕ್ರೋಶ ಇದೆ, ಒಳಗಡೆ ನೋವಿದೆ. ಅದಕ್ಕೆ ಪ್ರಧಾನಮಂತ್ರಿಗಳು ಉತ್ತರ ಕೊಡಬೇಕು ಎಂದು ಕೇಳಿದ್ದೆವು. ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರದ ಜವಾಬ್ದಾರಿಯನ್ನು ಇಬ್ಬರು ವೀರ ಮಹಿಳೆಯ ಹೊತ್ತಿದ್ದಾರೆ ಎಂದರು.

ಕಾಂಗ್ರೆಸ್ ಟ್ವೀಟ್ ಅವರ ಮನಸ್ಥಿತಿ ತೋರುತ್ತದೆ. ಮೊನ್ನೆ ಕಾಂಗ್ರೆಸ್‌ನ ಸಚಿವರೊಬ್ಬರು ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಅಂದಿದ್ದರು. ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎನ್ನುವ ಮನಸ್ಥಿತಿ ಎಲ್ಲಿಂದ ಬಂತು. ಮಾತೆತ್ತಿದರೆ ಬಾಂಬ್ ಬಾಂಬ್ ಎನ್ನುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.