ಕಠ್ಮಂಡು : ಶ್ರೀರಾಮನನ್ನು ವಿರೋಧಿಸಿ ಮಾತನಾಡಿದ್ದಕ್ಕೆ ನನ್ನ ಅಧಿಕಾರ ಹೋಯ್ತು ಎಂದು ನೇಪಾಳದ ಮಾಜಿ ಪ್ರಧಾನಿ ಕೆ.ಪಿ ಶರ್ಮಾ ಓಲಿ ಹೇಳಿದ್ದಾರೆ. ಈ ಮೂಲಕ ನೇಪಾಳದ ಪ್ರತಿಭಟನೆಯ ಹಿಂದೆ ಭಾರತದ ಕೈವಾಡವಿದೆ ಎಂದು ಬಿಂಬಿಸುವ ಪ್ರಯತ್ನ ಆರಂಭಿಸಿದ್ದಾರೆ.
ಯುವಜನತೆಯ ಪ್ರತಿಭಟನೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಓಲಿ ಅವರು ಶಿವಪುರದಲ್ಲಿರುವ ಬ್ಯಾರಕ್ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಹಲವು ವಿಚಾರಗಳನ್ನು ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ? – ಸ್ವಭಾವತಃ ನಾನು ಸ್ವಲ್ಪ ಹಠಮಾರಿ. ಆ ಹಠಮಾರಿತನ ಇಲ್ಲದಿದ್ದರೆ ಬಹುಶಃ ಈ ಎಲ್ಲಾ ಸವಾಲುಗಳ ನಡುವೆ ನಾನು ಬಹಳ ಹಿಂದೆಯೇ ಅಧಿಕಾರವನ್ನು ಬಿಟ್ಟುಕೊಡುತ್ತಿದ್ದೆ. ಹಠಮಾರಿ ಧೋರಣೆಯಿಂದಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ದೇಶದ ನಿಯಮಗಳನ್ನು ಪಾಲಿಸಬೇಕು ಮತ್ತು ಸ್ಥಳೀಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದೆ.
ಈ ಹಿಂದೆ ಲಿಪುಲೇಖ್, ಕಲಾಪಾನಿ ಮತ್ತು ಲಿಂಪಿಯಾಧುರ ನೇಪಾಳಕ್ಕೆ ಸೇರಿವೆ ಎಂದು ನಾನು ಪ್ರತಿಪಾದಿಸಿದ್ದೆ. ಧರ್ಮಗ್ರಂಥಗಳು ಹೇಳುವಂತೆ ಭಗವಾನ್ ಶ್ರೀರಾಮ ಭಾರತದಲ್ಲಿ ಜನಿಸಿಲ್ಲ. ನೇಪಾಳದಲ್ಲಿ ಜನಿಸಿದನೆಂದು ನಾನು ಸಮರ್ಥಿಸಿಕೊಂಡಿದ್ದೆ. ಈ ನಿಲುವುಗಳಲ್ಲಿ ನಾನು ರಾಜಿ ಮಾಡಿಕೊಂಡಿದ್ದರೆ ನಾನು ಅನೇಕ ಸುಲಭ ಮಾರ್ಗಗಳನ್ನು ಆರಿಸಿಕೊಳ್ಳಬಹುದಿತ್ತು. ಲಿಂಪಿಯಾಧುರ ಸೇರಿದಂತೆ ನೇಪಾಳದ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸದಿದ್ದರೆ ನನ್ನ ಜೀವನವು ತುಂಬಾ ವಿಭಿನ್ನವಾಗಿರುತ್ತಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚೀನಾ ಪರವಾಗಿದ್ದ ಕೆ.ಪಿ ಶರ್ಮಾ ಓಲಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಅದರಲ್ಲೂ ರಾಮನ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.
ಮೊದಲಿನಿಂದಲೂ ನೇಪಾಳ ಜೊತೆ ಮಿತೃತ್ವ ಹೊಂದಿದ್ದ ಭಾರತದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಕ್ಷದ ಸದಸ್ಯರೇ ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಒಲಿ ನನ್ನ ವಿರುದ್ಧ ಭಾರತ ಷಡ್ಯಂತ್ರ ಮಾಡಿದೆ ಎಂದು ದೂರಿದ್ದರು.














