ಮನೆ ರಾಜ್ಯ ನಮ್ಮ ಕಲಾ ಪ್ರಕಾರಗಳನ್ನು  ಉಳಿಸಿ, ಬೆಳೆಸಬೇಕು: ವಿದ್ವಾನ್‌ ಮೈಸೂರು ಎಂ.ಮಂಜುನಾಥ್‌

ನಮ್ಮ ಕಲಾ ಪ್ರಕಾರಗಳನ್ನು  ಉಳಿಸಿ, ಬೆಳೆಸಬೇಕು: ವಿದ್ವಾನ್‌ ಮೈಸೂರು ಎಂ.ಮಂಜುನಾಥ್‌

0

ಮೈಸೂರು(Mysuru): ನಮ್ಮ ಇತಿಹಾಸ, ಪರಂಪರೆ, ಕಲೆ ಹಾಗೂ ಸಾಹಿತ್ಯದ ಬಗ್ಗೆ ಹೆಮ್ಮೆ ಪಡಬೇಕು ಹಾಗೂ ಮತ್ತಷ್ಟು ವಿಸ್ತರಿಸಬೇಕು. ನಮ್ಮ ಕಲಾ ಪ್ರಕಾರಗಳನ್ನು ಉಳಿಸಿ-ಬೆಳೆಸಬೇಕು ಎಂದು ವಿದ್ವಾನ್‌ ಮೈಸೂರು ಎಂ.ಮಂಜುನಾಥ್‌ ಆಶಯ ವ್ಯಕ್ತಪಡಿಸಿದರು.

ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಜತ ಮಹೋತ್ಸವ ಹಾಗೂ ಶಿಲ್ಪಿಗಳಾದ ದೇವಲಕುಂದ ವಾದಿರಾಜ್ ಮತ್ತು ಬಿ.ಬಸವಣ್ಣ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೌತಿಕ ಶ್ರೀಮಂತಿಕೆ ಕ್ಷಣಿಕವಾದುದು; ಪರಂಪರೆಯ ಸಂಪತ್ತು ಶಾಶ್ವತವಾದುದು. ಮುಂದುವರಿದ ದೇಶಗಳು ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಬಹುದು. ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿಯಬಹುದು. ಆದರೆ, ಭಾರತದಂತೆ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿವೆಯೇ? ಎಂದು ಕೇಳಿದರು.

ಯಾವುದೇ ದೇಶದ ಗೌರವ, ಘನತೆ ಹಾಗೂ ಹಿರಿಮೆಯ ಅಳತೆಗೋಲು ಅಲ್ಲಿ ಸಂಸ್ಕೃತಿ, ಸಂಸ್ಕಾರ ಹಾಗೂ ಕಲೆಗೆ ಎಷ್ಟು ಮಹತ್ವ ಕೊಟ್ಟಿದ್ದಾರೆ ಎನ್ನುವುದೇ ಆಗಿದೆ. ಐಟಿ- ಬಿಟಿ, ಕೈಗಾರಿಕೆ, ತಂತ್ರಜ್ಞಾನ ಎಲ್ಲವೂ ಅಗತ್ಯವೇ. ಆದರೆ, ಇತಿಹಾಸದ ಭವ್ಯ ಪರಂಪರೆಗೆ ಯಾವುದೇ ದೊಡ್ಡ ಕಟ್ಟಡಗಳೂ ಸಮನಾಗವು. ನಮ್ಮದು ಭವ್ಯ ಇತಿಹಾಸವೆಂದು ಗರ್ವದಿಂದ ಹೇಳಿಕೊಳ್ಳಬಹುದು. ಆದರೆ, ಅಮೆರಿಕ ಅಥವಾ ಚೀನಾದವರಿಗೆ ಅದು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನ ವಂಶಸ್ಥ ಶ್ರೀಕೃಷ್ಣದೇವರಾಯ ಮಾತನಾಡಿ, ದೇಶ ಹಾಗೂ ಸಂಸ್ಕೃತಿಗಾಗಿ ಏನನ್ನಾದರೂ ಕೊಡುಗೆ ನೀಡಿದರೆ ಮುಂದಿನ ಪೀಳಿಗೆ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆ ಎಂದು ತಿಳಿಸಿದರು.

ಚೆನ್ನೈನ ಡಾ.ಕನಕರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ವೀರಣ್ಣ ಎಂ.ಅರ್ಕಸಾಲಿ ಮಾತನಾಡಿದರು.ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಸ್ವಾಗತಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ, ಶಿಲ್ಪಿಗಳಾದ ದೇವಲಕುಂದ ವಾದಿರಾಜ್‌ ಹಾಗೂ ಬಿ.ಬಸವಣ್ಣ ಬದುಕು ಮತ್ತು ಕಲಾಕೃತಿ ಕುರಿತು ಕ್ರಮವಾಗಿ ಗಣೇಶ್ ಎಲ್.ಭಟ್ ಹಾಗೂ ಪಿ.ಆರ್‌.ನಾಗರಾಜ್‌ ಮಾತನಾಡಿದರು.

ಹಿಂದಿನ ಲೇಖನಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ
ಮುಂದಿನ ಲೇಖನಹಿಜಾಬ್ ಪ್ರಕರಣ:  ಸುಪ್ರೀಂಕೋರ್ಟ್ ನಿಂದ ಇದೇ ವಾರ ತೀರ್ಪು ಪ್ರಕಟ ಸಾಧ್ಯತೆ