ಮನೆ ಸ್ಥಳೀಯ ನಮ್ಮದು  ರೈತ ಪರ ಸರ್ಕಾರ: ಎನ್ ಚಲುವರಾಯಸ್ವಾಮಿ

ನಮ್ಮದು  ರೈತ ಪರ ಸರ್ಕಾರ: ಎನ್ ಚಲುವರಾಯಸ್ವಾಮಿ

0

ಮೈಸೂರು : ನಮ್ಮದು  ಜನಸಾಮಾನ್ಯರ , ರೈತರ ಪರ ಸರ್ಕಾರ. ಕೃಷಿ ಕ್ಷೇತ್ರದ ಸುಧಾರಣೆಗೆ ಅತೀ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.

Join Our Whatsapp Group

ಮೈಸೂರಿನ  ಜಿ.ಕೆ ಮೈದಾನದಲ್ಲಿ ಏರ್ಪಡಿಸಿರುವ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಲಾಭದಾಯಕವಾಗಿಸುವುದೇ ರಾಜ್ಯ ಸರ್ಕಾರದ ಧ್ಯೇಯ ಅದಕ್ಕಾಗಿ ಕೃಷಿ ,ಪಶುಸಂಗೋಪನೆ, ತೋಟಗಾರಿಗೆ ರೇಷ್ಮೆ ಎಲ್ಲವನ್ನೂ ಒಟ್ಟುಗೂಡಿಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.

 ಕೃಷಿಕರ ಆದಾಯದಲ್ಲಿ ವೃದ್ಧಿಯಾಗಬೇಕು ವೈಜ್ಞಾನಿಕ ಬೆಲೆ ದೊರೆಯುವ ಜೊತೆಗೆ ಸರ್ವ ಋತು ವರಮಾನ ಬರುವಂತೆ ಬೇಸಾಯ ಪದ್ಧತಿ ಅಳವಡಿಕೆಯಾಗಬೇಕು ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೃಷಿಕರು ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು. ಹೈನುಗಾರಿಕೆ ಕುರಿ, ಕೋಳಿ, ಹಂದಿ, ಮೀನು, ಜೇನು ಸಾಕಾಣಿಕೆಗಳ ಬಗ್ಗೆಯೂ ಗಮನ ಹರಿಸಬೇಕು ಆಗ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.

ಕೃಷಿ ಯಾಂತ್ರೀಕರಣದ ಪರಿಣಾಮಕಾರಿ ಅಳವಡಿಕೆ ಅಗತ್ಯ

ಕೃಷಿ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 1000 ಕೋಟಿ ರೂ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ ಎಂದು ಕೃಷಿ ಸಚಿವರು ಹೇಳಿದರು

ಕೃಷಿಕರು ಸಾಂಪ್ರಾದಾಯಿಕ ಕೃಷಿ ಜೊತೆಗೆ ಸಮಗ್ರ ಬೇಸಾಯಕ್ಕೆ ಒತ್ತು ನೀಡಬೇಕು, ಬದಲಾಗುತ್ತಿರುವ ತಂತ್ರಜ್ಞಾನ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ಪಾದನೆಯ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದು ಕಿವಿ ಮಾತು ಹೇಳಿದರು.

ದಸರಾ ನಮ್ಮ ಭವ್ಯ ಪರಂಪರೆಯ ಸಂಕೇತ, ನಮ್ಮ ಶ್ರೀಮಂತ ಸಂಸ್ಕೃತಿಯ ಪ್ರತೀಕ .

 ಇದು, ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಆರಾಧನೆಯ ಪರ್ವಕಾಲ, ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲರಿಗೂ ಒಳಿತು ಮಾಡು ಎಂದು ನಾನು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದರು.

 ಮೈಸೂರು ದಸರಾ ಎಂದರೆ ಅದೊಂದು ವಿಸ್ಮಯ, ಸಂಭ್ರಮ, ಇದು ನಾಡಿನ ಮನೆ ಮನೆ ಹಬ್ಬ.  ಶತ ಶತಮಾನಗಳಿಂದ ರಾಜ ಪರಂಪರೆಯಿಂದ ಈವರೆಗೂ ಅದೇ ವೈಭವ, ಭಕ್ತಿ, ಶ್ರದ್ಧೆ, ಸಂಪ್ರದಾಯಗಳಿಂದ ಮುಂದುವರೆದಿದೆ.  ದಸರಾ ಬಂತೆಂದರೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ಇತ್ತ ನೋಡುತ್ತದೆ ಎಂದು ಅವರು ಮೈಸೂರು ದಸರಾ ಸಡಗರ ಬಣ್ಣಿಸಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ವೆಂಕಟೇಶ್ ಅವರೂ ಸಹ ಮಾತನಾಡಿದರು. ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷರಾದ  ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಹರೀಶ್ ಗೌಡ ಮತ್ತಿತರರು ಹಾಜರಿದ್ದರು.

ಇದೇ ವೇಳೆ ರೈತ ಸಾಧಕರನ್ನು ಸನ್ಮಾನಿಸಲಾಯಿತು.