ವಾಷಿಂಗ್ಟನ್: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ಪರಿಸ್ಥಿತಿ ಬಾಲ ಮುದುರಿದ ನಾಯಿಯಂತಾಗಿದೆ ಎಂದು ಪೆಂಟಗನ್ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ತಿಳಿಸಿದ್ದಾರೆ.
ಭಾರತವು ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಹೊಡೆಯಿತು. ಭಾರತದ ಏಟಿಗೆ ವಾಯುನೆಲೆಗಳು ಧ್ವಂಸವಾದ ಬಳಿಕ ಕದನ ವಿರಾಮ ಘೋಷಿಸಿ ಅಂತ ಬಾಲ ಮುದುರಿಕೊಂಡು ನಾಯಿಯಂತೆ ಪಾಕಿಸ್ತಾನ ಓಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪಾಕ್ ಸೇನೆಯು ತುಂಬಾ ಹೀನಾಯವಾಗಿ ಸೋತಿದೆ. ಏನೇ ಆಗಲಿ ವಾಸ್ತವದಿಂದ ತಪ್ಪಿಸಿಕೊಳ್ಳಲು ಅದರಿಂದ ಸಾಧ್ಯವಿಲ್ಲ. ಭಾರತ ರಾಜತಾಂತ್ರಿಕ ಮತ್ತು ಮಿಲಿಟರಿಯಲ್ಲಿ ವಿಜಯ ಸಾಧಿಸಿದೆ. ಈಗ ಎಲ್ಲರ ಗಮನವೂ ಪಾಕ್ ಪ್ರಯೋಜಿತ ಭಯೋತ್ಪಾದನೆ ಮೇಲೆ ಕೇಂದ್ರೀಕರಿಸಿದೆ ಎಂದು ತಿಳಿಸಿದ್ದಾರೆ.
ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಭಾಗವಹಿಸಿದ್ದನ್ನು ನೋಡಿದರೆ, ಭಯೋತ್ಪಾದಕ ಮತ್ತು ಐಎಸ್ಐ ಅಥವಾ ಪಾಕಿಸ್ತಾನಿ ಸಶಸ್ತ್ರ ಪಡೆಗಳ ಸದಸ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತೋರುತ್ತದೆ. ಮೂಲತಃ ಪಾಕಿಸ್ತಾನವು ತನ್ನದೇ ಆದ ವ್ಯವಸ್ಥೆಯಿಂದ ಕೊಳೆಯನ್ನು ಹೊರತೆಗೆಯಬೇಕೆಂದು ಜಗತ್ತು ಒತ್ತಾಯಿಸಲಿದೆ. ಆದ್ದರಿಂದ, ರಾಜತಾಂತ್ರಿಕವಾಗಿ ಭಾರತವು ಸಂಭಾಷಣೆಯನ್ನು ಬದಲಾಯಿಸಿತು. ಮಿಲಿಟರಿ ದೃಷ್ಟಿಯಿಂದ ಪಾಕಿಸ್ತಾನ ಆಘಾತಕ್ಕೊಳಗಾಗಿದೆ ಎಂದು ಹೇಳಿದ್ದಾರೆ.
ಪಾಕ್ನ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಇದರಿಂದ ಪಾಕಿಸ್ತಾನ ಬಾಲ ಮುದುರಿದ ನಾಯಿಯಂತೆ ಹೆದರಿ ಕದನ ವಿರಾಮ ಸಾಧಿಸಲು ಪ್ರಯತ್ನಿಸಿತು. ಆದರೂ, ಪಾಕಿಸ್ತಾನ ಮುಂದೆ ಏನು ಮಾಡುತ್ತದೆ ಎಂಬುದು ಪ್ರಶ್ನೆಯಾಗಿದೆ. ಪಾಕ್ ಮಿಲಿಟರಿಯಲ್ಲಿ ಸಮಸ್ಯೆ ಇದೆ. ಈ ದೇಶ ತನ್ನ ಮನೆಯನ್ನು ಸ್ವಚ್ಛಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ 26 ಪ್ರವಾಸಿಗರು ಸಾವನ್ನಪ್ಪಿದ ಪ್ರಕರಣವನ್ನು ಜಾಗತಿಕ ನಾಯಕರು ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಜಾಗತಿಕ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಉಗ್ರರ ಮಟ್ಟಹಾಕಲು ಭಾರತ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.














