ಶಿವಮೊಗ್ಗ: ಮಂಡ್ಯದ ನಾಗಮಂಗಲದಲ್ಲಿ ಹಿಂದೂಗಳೆಲ್ಲರೂ ಸೇರಿ ಆರಾಧ್ಯ ದೈವ ಗಣಪತಿ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಮೆರವಣಿಗೆ ವೇಳೆ ಪಾಕಿಸ್ತಾನದ ಮನಸ್ಥಿತಿ ಇರುವವರು ಕಿಡಿ ಹಚ್ಚಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಸೀದಿ ಎದುರಿಗೆ ಮೆರವಣಿಗೆ ತೆಗೆದುಕೊಂಡು ಹೋಗಬಾರದು. ಮಸೀದಿ ಎದುರಿಗೆ ಡೊಳ್ಳು ಹೊಡಿಯಬಾರದು, ಮಂಗಳವಾದ್ಯ ನುಡಿಸಬಾರದೆಂದು ಕಲ್ಲು ಎಸೆದಿದ್ದಾರೆ. ಕೃತಕ ಬಾಂಬ್ ಎಸೆದು ರಾಷ್ಟ್ರದ್ರೋಹಿ ಕೃತ್ಯವೆಸಗಿದ್ದಾರೆ. ದೇಶದಲ್ಲಿ ಈ ರೀತಿಯಾಗುವುದು ಕಡಿಮೆಯಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಪಾಕಿಸ್ತಾನ ಮನಸ್ಥಿತಿ ಇರುವವರು ಈ ರೀತಿ ಬದುಕು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರಶ್ನೆಯಿಲ್ಲದೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆಯಿಲ್ಲದೆ ಎಲ್ಲಾ ರಾಷ್ಟ್ರಭಕ್ತರು ಇದನ್ನು ಖಂಡಿಸಬೇಕು. ರಾಷ್ಟ್ರದ್ರೋಹಿ ಕೆಲಸವನ್ನು ಖಂಡಿಸಬೇಕು. ರಾಜ್ಯದಲ್ಲಿ, ದೇಶದಲ್ಲಿ ಈ ರೀತಿ ಎಂದೂ ಆಗಬಾರದು. ಯಾರು ಈ ರೀತಿ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಆರೋಪಿಗಳನ್ನು ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹಿ ಕೇಸುಗಳನ್ನು ಹಾಕಬೇಕು. ಆರೋಪಿಗಳಿಗೆ ಜೈಲಿಗೆ ಹಾಕಬೇಕು. ಎಲ್ಲರೂ ಒಟ್ಟಾಗಿ ಸೇರಿ ಇದನ್ನು ಖಂಡನೆ ಮಾಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.