ಗುವಾಹಟಿ : ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿ 27 ರನ್ಗಳ ಜಯ ಸಾಧಿಸಿತ್ತು. ಇನ್ನೂ ತಮ್ಮ ತಂಡದ ಸೋಲಿನ ಬಗ್ಗೆ ಪಂದ್ಯದ ನಂತರ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ.
‘ಪವರ್ಪ್ಲೇ ಸಮಯದಲ್ಲಿ ನಮ್ಮ ಬೌಲರ್ಸ್ ತಮ್ಮ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ವಿಫಲರಾದರು. ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನನಗೆ ದಿಗ್ಭ್ರಮೆಯನ್ನುಂಟು ಮಾಡಿತು. ಭವಿಷ್ಯದಲ್ಲಿ ಈ ಯುವಕ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಾನೆ. ವೈಭವ್ ಹಾಗೂ ಜೈಸ್ವಾಲ್ ಅದ್ಭುತ ಆರಂಭ ನೀಡಿದರು. ಅವರಿಬ್ಬರ ಜೊತೆಯಾಟ ದೊಡ್ಡ ಸ್ಕೋರ್ಗೆ ಕಾರಣವಾಯಿತು. ಇದು ನಮ್ಮ ಸೋಲಿಗೆ ಕಾರಣವಾಯಿತು ಎಂದಿದ್ದಾರೆ.
ನಮ್ಮ ಬೌಲಿಂಗ್ ವೈಫಲ್ಯ ಸಹ ಸೋಲಿಗೆ ಪ್ರಮುಖ ಕಾರಣ. ಖಂಡಿತವಾಗಿಯೂ ನಮ್ಮ ಬ್ಯಾಟಿಂಗ್ ಅಲ್ಲ. ನಮ್ಮ ಯೋಜನೆಗಳ ಪ್ರಕಾರ ಬೌಲಿಂಗ್ ಮಾಡಲು ನಮಗೆ ಸಾಧ್ಯವಾಗಲಿಲ್ಲ. ರಾಜಸ್ಥಾನ ರಾಯಲ್ಸ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿತು. ನಮ್ಮ ಬೌಲರ್ಗಳು ಈ ಸೋಲಿಗೆ ಜವಾಬ್ದಾರರಾಗಿರಬೇಕು. ರಾಜಸ್ಥಾನ ನಿಜವಾಗಿಯೂ ಅಸಾಧಾರಣವಾಗಿ ಆಡಿತು ಎಂದಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ, ಪಂದ್ಯದ ಫಲಿತಾಂಶವು ಕೇವಲ ಎರಡು ಎಸೆತಗಳಲ್ಲಿ ಬದಲಾಗಬಹುದು ನಾವು 27 ರನ್ಗಳ ಅಂತರದಿಂದ ಸೋತಿದ್ದೇವೆ ಎಂಬ ಅಂಶ ನಾವು 5 ಎಸೆತಗಳನ್ನು ಉತ್ತಮವಾಗಿ ಬೌಲಿಂಗ್ ಮಾಡಬೇಕಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆ ಐದು ಸಿಕ್ಸರ್ಗಳನ್ನು ಬಿಟ್ಟುಕೊಡದಿದ್ದರೆ ನಾವು ನಿಸ್ಸಂದೇಹವಾಗಿ ಈ ಪಂದ್ಯ ಗೆಲ್ಲುತ್ತಿದ್ದೆವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ್ದಾರೆ. 15 ವರ್ಷದ ಆಟಗಾರನ ಭರ್ಜರಿ ಆಟದಿಂದ ನಾನು ಆಕರ್ಷಿತನಾಗಿದ್ದೇನೆ ಎಂದಿದ್ದಾರೆ.














