ಮೈಸೂರು : ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಆಸ್ಪತ್ರೆ ಹಣಕ್ಕಾಗಿ ಗ್ರಾಮದ ಯುವಕರು, ಸಂಬಂಧಿಗಳ ಜೊತೆ ಸೇರಿ ಕುಟುಂಬವೊಂದು ಭಿಕ್ಷೆ ಬೇಡಿದೆ.
ಇದೇ ತಿಂಗಳ 2ನೇ ತಾರೀಖು ಬದನವಾಳು ಬಳಿ 2 ಬೈಕ್ ನಡುವೆ ಅಪಘಾತ ಆಗಿದ್ದು, 6 ಜನ ಗಾಯಗೊಂಡಿದ್ದರು. ಅದರಲ್ಲಿ ಒಂದೇ ಕುಟುಂಬದ ತಂದೆ ಮಹೇಶ್ (38) ತಾಯಿ ರಾಣಿ (32) ಹಾಗೂ ಮಗಳು ಆದ್ಯ (5) ಗಾಯಗೊಂಡಿದರು. ತಾಯಿ, ಮಗು ಒಂದೆಡೆ, ತಂದೆ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಗು ಆದ್ಯಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ದಿನದ ಚಿಕಿತ್ಸೆಗೆ 1,80,000 ಹಣ ಕಟ್ಟಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಮಗು ನೋಡಬೇಕು, ವೆಂಟಿಲೇಟರ್ನಿಂದ ಹೊರ ತೆಗೆಯಬೇಕು ಅಂದ್ರೆ ಹಣ ಕಟ್ಟಿ ಅಂತಿದ್ದಾರೆ ಅಂತ ಸಂಬಂಧಿಕರು ಆರೋಪಿಸಿದ್ದಾರೆ. ಕೂಲಿ ಮಾಡುವ ಕುಟುಂಬಕ್ಕೆ ಅಷ್ಟು ಹಣ ನೀಡಲು ಆಗದ ಕಾರಣ ಬಡ ಕುಟುಂಬದ ನೆರವಿಗೆ ಗ್ರಾಮದ ಯುವಕರು, ಸಂಬಂಧಿಗಳು ಭಿಕ್ಷೆ ಬೇಡಿದ್ದಾರೆ.
ದೊಡ್ಡಮ್ಮ ಮಂಗಳ ಅನ್ನೋವ್ರು ಭಿಕ್ಷೆ ಬೇಡೋ ವಿಡಿಯೋ ವೈರಲ್ ಆಗಿದೆ. ಆದರೆ, ಖಾಸಗಿ ಆಸ್ಪತ್ರೆ (ಬೃಂದಾವನ) ಆಡಳಿತ ಮಂಡಳಿಯ ಖಂಡೇಶ್ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆ ಬಂದಾಗ ಇಲ್ಲಿನ ಚಿಕಿತ್ಸಾ ವೆಚ್ಚದ ಬಗ್ಗೆ ತಿಳಿಸಲಾಗಿತ್ತು. ಅವರು ಅದಕ್ಕೆ ಒಪ್ಪಿದ್ದರು.
ಆ ಕುಟುಂಬದ ಆರ್ಥಿಕ ಪರಿಸ್ಥಿತಿ ನಮಗೆ ಗೊತ್ತಿರಲಿಲ್ಲ. ಭಿಕ್ಷೆ ಬೇಡಿ ಹಣ ತಂದಿದ್ದಾರೆ ಎಂಬುದು ನಮಗೆ ವಿಡಿಯೋ ಮೂಲಕ ತಿಳಿಯಿತು. ಹೀಗಾಗಿ ಈ ವಿಡಿಯೋ ನೋಡಿ ನಾವು ರಿಯಾಯಿತಿ ಕೊಡಲು ತೀರ್ಮಾನ ಮಾಡಿದ್ದೇವೆ. ಮಗು ಐಸಿಯುನಲ್ಲಿದ್ದರೂ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.















