ದಾವಣಗೆರೆ : ಚಿಗಟೀರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಅರೋಪಿಗಳ ಬಂಧನಕ್ಕೆ ಹೋಗಿದ್ದಾಗ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ನಡೆದ ತೀವ್ರ ವಾಗ್ವಾದದ ವಿಡಿಯೋಗಳು ವೈರಲ್ ಆಗಿವೆ. ಅಲ್ಲದೇ ಆರೋಪಿಗಳ ಬಂಧನಕ್ಕೆ ತೀವ್ರ ಹೋರಾಟ ನಡೆಸಿದ್ದ, ಸಿಪಿಐ ಗಾಯಿತ್ರಿಯವರ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಮಕ್ಕಳಾದ ಹಸೇನ್, ಹುಸೇನ್ ಹಾಗೂ ಅವರ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆ ಬಿಡಿಸಲು ಸಿಪಿಐ ಗಾಯಿತ್ರಿ, ಕಾನ್ಸ್ಟೇಬಲ್ ಹರೀಶ್ ಹಾಗೂ ಕೆಂಚಪ್ಪ ಅವರು ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಅಯೂಬ್ ಅವರ ಮಕ್ಕಳು ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದರು.
ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಿಪಿಐ ಗಾಯತ್ರಿಯವರು ಕೆರಳಿ ಕೆಂಡವಾಗಿದ್ದರು. ಆರೋಪಿಗಳ ಬಂಧನ ಆಗುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತಿದ್ದರು. ಈ ವೇಳೆ ಪೊಲೀಸರು ಮದ್ಯ ಸೇವನೆ ಮಾಡಿ ಅರೆಸ್ಟ್ ಮಾಡಲು ಬಂದಿದ್ದಾರೆ ಎಂದು ಅಯೂಬ್ ಪೈಲ್ವಾನ್ ಅರೋಪ ಮಾಡಿದ್ದರು.
ಇದಕ್ಕೆ ಸಿಪಿಐ, ಏನು ಬೇಕಾದ್ರೂ ಅರೋಪ ಮಾಡಿ, ಬೇಕಾದ್ರೆ ನೀನು ದೂರು ಕೊಡು ಎಂದಿದ್ದರು. ಈ ಪ್ರಕರಣದಲ್ಲಿ ಫೈಲ್ವಾನ್ ಪುತ್ರ ಹಸೇನ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಪುತ್ರ ಹುಸೇನ್ ತಲೆಮರೆಸಿಕೊಂಡಿದ್ದು ಆತನಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ.















