ಮನೆ ರಾಜ್ಯ ಸಿದ್ದರಾಮಯ್ಯನವರಿಂದ ಕಳಪೆ ಬಜೆಟ್​ ಮಂಡನೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ

ಸಿದ್ದರಾಮಯ್ಯನವರಿಂದ ಕಳಪೆ ಬಜೆಟ್​ ಮಂಡನೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇದು ಅವರ 15ನೇ ಬಜೆಟ್ ಆಗಿದ್ದು, ಈ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಸಿದ್ದರಾಮಯ್ಯನವರು ಕಳಪೆ ಬಜೆಟ್​ ಮಂಡಿಸಿದ್ದಾರೆ. ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್​ ನೋಡಿಲ್ಲ.  ಹದಿನಾಲ್ಕು ಬಜೆಟ್​ಗಳನ್ನು ಮಂಡಿಸಿರುವ ಸಿದ್ದರಾಮಯ್ಯರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.​

ಈ ಬಾರಿ ಬಜೆಟ್​ನ ಬಹುತೇಕ ಅಂಶ ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆ. ದೆಹಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿರುವ ಈ ಆಯವ್ಯಯ ಮಾಡಲಾಗಿದೆ. ವಾಸ್ತವಿಕ ಅಂಕಿ ಸಂಖ್ಯೆ ನೀಡದೇ ಕಾಲ್ಪನಿಕ ಅಂಕಿ ಸಂಖ್ಯೆ ನೀಡಿದ್ದು, ಈ ಬಜೆಟ್ ರಾಜ್ಯದ ಜನರಿಗೆ ಮಾಡಿರುವ ಮೋಸದಂತಿದೆ.

ಜಲಸಂಪನ್ಮೂಲ ಖಾತೆಗೆ ಯಾವುದೇ ಅನುದಾನ ನೀಡದೇ, ಡಿ.ಕೆ. ಶಿವಕುಮಾರ್ ಅವರಿಗೂ ಮೋಸ ಮಾಡಲಾಗಿದೆ. ಅವರು ಮೇಕೆ ದಾಟು ಪಾದಯಾತ್ರೆ ಮಾಡಿದ್ದೇ ಸಾಧನೆಯಾಗಿದೆ. ಅದರಂತೆ ಕೃಷ್ಣಾ ಕೊಳ್ಳ, ಮಹದಾಯಿ, ನವಿಲೆ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಬೆಂಗಳೂರು ಅಭಿವೃದ್ಧಿಗೆ ಯಾವುದೇ ಅನುದಾನ ನಿಗದಿಯಿಲ್ಲ. ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಸ್ಪಷ್ಟ ಘೋಷಣೆಯಿಲ್ಲ. ಓಪಿಎಸ್ ಪುನರ್ ಜಾರಿ ಬಗ್ಗೆ ಚಕಾರ ಎತ್ತಿಲ್ಲ. ವರುಣ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಕೊಟ್ಟು, ಬೇರೆ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ. 27,353 ಸಾವಿರ ಕೋಟಿ ರಾಜಸ್ವ ಕೊರತೆ ಬಜೆಟ್ ಮಂಡಿಸಿರುವುದು, ರಾಜ್ಯ ಆರ್ಥಿಕ ದಿವಾಳಿಯಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಕಾಂಗ್ರೆಸ್ ಆಡಳಿತದಿಂದ ರಾಜ್ಯ ದಿವಾಳಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಣಕಾಸು ಪರಿಸ್ಥಿತಿಯನ್ನು ದಿವಾಳಿಯಂಚಿಗೆ ತಂದು ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಜೆಟ್​ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ‘ದೇಶದಲ್ಲಿ ಅಮೃತ ಕಾಲದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಸಿದ್ದರಾಮಯ್ಯ ಬಜೆಟ್ ನೋಡಿದ್ರೆ ಅಮೃತ ಅಲ್ಲ, ವಿಷ, ವಿನಾಶ ಕಾಲ ಎನ್ನುವುದು ತಿಳಿಯುತ್ತಿದೆ. ಹಲವಾರು ಸುಳ್ಳುಗಳನ್ನು ರಾಜ್ಯಪಾಲರಿಂದ ಹೇಳಿಸಿದ್ದಾರೆ. ಬಜೆಟ್ ಕೂಡ ಸುಳ್ಳಿನಿಂದ ಕೂಡಿದೆ. ನಿನ್ನೆ(ಫೆ.15) ಪರಿಷತ್ತಿನಲ್ಲಿ ಸಿದ್ದರಾಮಯ್ಯ ಅವರು ನಾನು ಹೇಳೋದೆಲ್ಲಾ ಸತ್ಯ ಅಂದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ, ಸತ್ಯ ಮಾಡುತ್ತೇವೆ ಅಂತಾರೆ, ಹಾಗೆಯೇ ಮಾಡಿದ್ದಾರೆ. ಪ್ರತಿ ವಿಷಯದಲ್ಲೂ ಕೇಂದ್ರದ ಮುಂದೆ ಹೋಗುತ್ತೇವೆ ಎನ್ನುತ್ತಾರೆ. ಇದೀಗ ಅಭಿವೃದ್ಧಿ ವಿಚಾರಕ್ಕೂ ಕೇಂದ್ರದ ಮುಂದೆ ಹೋಗ್ತವೇ ಎಂದಿದ್ದಾರೆ. ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ಯಾವ ಯೋಜನೆ ಹಾಕಿದ್ದರೋ ಅದೇ ಯೋಜನೆಯನ್ನೇ ಉಲ್ಲೇಖ ಮಾಡಿದ್ದಾರೆ.

ಇನ್ನು ಹಿಂದಿನ ಸರ್ಕಾರದ ಕಾರ್ಯಕ್ರಮ ಹೇಳಿಕೊಂಡಿದ್ದಾರೆ ವಿನ, ಯಾವುದೇ ಹೊಸ ವಿಚಾರ ಇಲ್ಲ. ತೆಲಂಗಾಣ, ಅಂಧ್ರಪ್ರದೇಶ ಜೊತೆ ಸಮಾಲೋಚನೆ ಮಾಡುತ್ತೇವೆ ಎಂದರು, ಯಾವ ಚರ್ಚೆಯೂ ಆಗಲಿಲ್ಲ. ಮೇಕೇದಾಟಿಗೆ ಪಾದಯಾತ್ರೆ ಮಾಡಿದ್ದೇ ಮಾಡಿದ್ದು, ಅಧಿಕಾರಕ್ಕೆ ಬಂದರೂ ಏನೂ ಮಾಡಲಿಲ್ಲ. ತಪ್ಪು ಮಾಡಿರೋದು ಇವರು, 15 ನೇ ವೇತನ ಆಯೋಗಕ್ಕೆ 3 ಸಾವಿರ ಕೋಟಿ ಅನುದಾನ ಇಟ್ಟಿದ್ರು, ಕೊಡಲಿಲ್ಲ ಎಂದು ದೂರಿದ್ದಾರೆ. ಕೇಂದ್ರ ಹಣ ಕೊಡಲಿಲ್ಲ ಎನ್ನುತ್ತಾರೆ, ನಿಮ್ಮ ಕಾರ್ಯಕ್ರಮ ಏನು?, ಪತ್ರಿಕೆ ತೆಗೆದ್ರೆ ಐದು ಗ್ಯಾರಂಟಿ ಇವರ ಮುಖ ಇರಲೇಬೇಕು. ವಿನಾಶ ಕಾಲ ಏನಿದೆಯೋ ಅದು ಈ ಬಜೆಟ್‌ನಲ್ಲಿ ಇದೆ. 14 ಬಜೆಟ್ ಕೊಟ್ಟಿರುವ ಸಿದ್ದರಾಮಯ್ಯ, 15 ಬಜೆಟ್ ನಲ್ಲಿ ಏನೂ ಇಲ್ಲ. ಇದನ್ನ ನೋಡಿದ್ರೆ ಸಿದ್ದರಾಮಯ್ಯ ಅವರ ಬಜೆಟ್ ಅಲ್ಲ, ಬೇರೆಯವರ ಬಜೆಟ್ ಅನ್ನೋದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಅರ್ಥಶಾಸ್ತ್ರ, ಅಭಿವೃದ್ಧಿ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್‌: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ
ಮುಂದಿನ ಲೇಖನಮಟನ್​ ಸಾಂಬಾರ್​ ವಿಚಾರವಾಗಿ ಕೊಲೆ: ಆರೋಪಿಗೆ 6 ವರ್ಷ ಜೈಲು